ಜೋಡುಪಾಲ, ಎರಡನೇ ಮೊಣ್ಣಂಗೇರಿ ಮೇಲೆ ಮತ್ತೆ ಆತಂಕದ ಕರಿ ಮೋಡ

May 12, 2019
8:00 AM

ಸುಳ್ಯ:  ಮಳೆಗಾಲಕ್ಕೆ ಬೆದರಿ ಗುಳೆ ಹೊರಡಲು ಸಿದ್ಧವಾಗುತಿದೆ ಈ ಎರಡು ಊರುಗಳು….!.

ಹೌದು ಕಳೆದ ಮಳೆಗಾಲದಲ್ಲಿ ಉಂಟಾದ ಜಲಪ್ರಳಯ ಭೂ ಕುಸಿತದಿಂದಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಅತಂತ್ರರಾದ ಕೊಡಗು ಜಿಲ್ಲೆಯ ಜೋಡುಪಾಲ, ಎರಡನೇ ಮೊಣ್ಣಂಗೇರಿ ಪ್ರದೇಶಗಳ ಸ್ಥಿತಿಯಿದು. ಮತ್ತೆ ಮಳೆಯ ಅಬ್ಬರ, ಮಳೆಗಾಲದ ರೌದ್ರಾವತಾರಕ್ಕೆ ಬೆದರಿ ಈ ಊರಿನ ಜನರು ತಮ್ಮ ಊರನ್ನೇ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉಂಟಾದ ಜಲಪ್ರಳಯ, ಭೂಕುಸಿತ, ಬೆಟ್ಟಗಳೇ ಕುಸಿದು ಬಿದ್ದ ಭೀಕರತೆಯ ಭಯಾನಕತೆ ಈ ಪ್ರದೇಶದ ಜನರನ್ನು ಇನ್ನೂ ಬಿಟ್ಟಿಲ್ಲ. ಅದುದರಿಂದ ತಮ್ಮದೆಲ್ಲವನ್ನೂ ಬಿಟ್ಟು ಹಲವಾರು ತಿಂಗಳ ಕಾಲ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕಳೆದು ಕೆಲವು ತಿಂಗಳ ಬಳಿಕ ಮನೆಗೆ ಮರಳಿ ಮನೆ, ಮಠ, ಅಂಗಡಿ, ಕೃಷಿ ಎಲ್ಲವನ್ನೂ ಮರಳಿ ಕಟ್ಟಲು ಪ್ರಾರಂಭಿಸಿದರೂ ಮತ್ತೆ ಎಲ್ಲವನ್ನು ತೊರೆದು ಬೇರೆಡೆಗೆ ಹೋಗಬೇಕಾದ ಅನಿವಾರ್ಯತೆಯ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ ಇಲ್ಲಿಯ ಜನತೆ.

 

 

ಮನೆ ಬಿರುಕು ಬಿಟ್ಟಿದೆ, ಬೆಟ್ಟ ಸೀಳಿ ನಿಂತಿದೆ:

ಕಳೆದ ವರ್ಷ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತದಿಂದಾಗಿ ಬಾನಿಗೆ ಮುತ್ತಿಕ್ಕುತ್ತಿದ್ದ ಹಸಿರು ಬೆಟ್ಟ ಗುಡ್ಡಗಳು ಕುಸಿದು ಬಿದ್ದಿದೆ, ಬ್ರಹದಾಕಾರದ ಬಂಡೆಗಳು, ಮುಗಿಲೆತ್ತರದ ಮರಗಳು ಕೊಚ್ಚಿ ಹೋಗಿದೆ. ರಕ್ತ ಚಿಮ್ಮುವ ಗಾಯದಂತೆ ಗೋಚರಿಸುವ ಸೀಳಿ ಹೋದ ಬೆಟ್ಟ ಗುಡ್ಡಗಳು ಅದರ ಭೀಕರತೆ ಗೋಚರಿಸುತ್ತದೆ. ಅಲ್ಲಲ್ಲಿ ಸಿಡಿದು, ವಾಲಿ ನಿಂತ ಬೆಟ್ಟಗಳು ಮತ್ತೆ ಕುಸಿಯಲು ಹಪ ಹಪಿಸುತ್ತಿರುವಂತೆ ಭಾಸವಾಗುತ್ತದೆ. ಬಿರುಕು ಬಿಟ್ಟ ಗೋಡೆಗಳು, ಅರ್ಧ ಕುಸಿದ ಮನೆಗಳು ಕುಸಿಯಲು ತವಕಿಸುವಂತೆ ಭಾಸವಾಗುತ್ತದೆ. ಆದುದರಿಂದ ಈ ಮಳೆಗಾಲದಲ್ಲಿ ಇಲ್ಲಿರಲು ಭಯವಾಗುತ್ತದೆ. ಆದುದರಿಂದ ಎಲ್ಲಾದರು ಹೋಗಬೇಕು ಎನ್ನುತ್ತಾರೆ ಇಲ್ಲಿಯ ಜನತೆ. ಜೋಡುಪಾಲ, ಮೊಣ್ಣಂಗೇರಿ ಭಾಗದ ಹಲವಾರು ಮನೆಗಳು ನಾಶವಾದ ಮತ್ತು ಬಿರುಕು ಬಿಟ್ಟ ಕಾರಣ ಅಲ್ಲಿ ಇರಲು ಸಾಧ್ಯವಿಲ್ಲ. ಹಲವರು ನಾಶವಾದ ಮನೆಯನ್ನು ಬಿಟ್ಟು ಬೇರೆಡೆ ಸ್ಥಳಾಂತರ ಗೊಂಡಿದ್ದರೆ, ಹಿಂತಿರುಗಿ ಬಂದವರು ಹಲವರು ಬಾಡಿಗೆ ಮನೆಗಳನ್ನು ಹುಡುಕುತ್ತಿದ್ದಾರೆ, ಹಲವರು ನಿರಾಶ್ರಿತರ ಕೇಂದ್ರಗಳನ್ನು ಎದುರು ನೋಡಿತ್ತಿದ್ದಾರೆ. ಇನ್ನು ಹಲವರು ಏನು ಮಾಡಬೇಕೆಂದೇ ತೋಚದೆ ಆಕಾಶದತ್ತ ದೃಷ್ಠಿ ನೆಡುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಇರಲು ಆಗದೆ ಬಾಡಿಗೆ ಮನೆ ಹುಡುಕುತಿರುವುದಾಗಿ ಜೋಡುಪಾಲದ ಸುಂದರ ಪೂಜಾರಿ ಹೇಳುತ್ತಾರೆ. ಇಲ್ಲಿ ಇರಲು ಧೈರ್ಯ ಇಲ್ಲ ಎನ್ನುತ್ತಾರೆ ಎರಡನೇ ಮೊಣ್ಣಂಗೇರಿಯ ಸೋಮಪ್ಪ ಮತ್ತು ಕುಟುಂಬದವರು.

 

ಕೃಷಿ ಬದುಕು ಕರಟಿದೆ-ಸ್ವಾವಲಂಬನೆ ಬದುಕಿಗೆ ಏಟು ಬಿದ್ದಿದೆ:

ಸಂಪೂರ್ಣವಾಗಿ ಕೃಷಿಯನ್ನೇ ನಂಬಿ ಬದುಕು ಕಟ್ಟಿ ಕೊಂಡವರು ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಭಾಗದ ಜನರು. ಕೃಷಿ ಸಂಸ್ಕøತಿಯೊಂದಿಗೆ ಸ್ವಾವಲಂಬನೆಯ ಬದುಕನ್ನು ಸಾಗಿಸುತ್ತಿದ್ದವರು. ಆದರೆ ಕಳೆದ ಬಾರಿ ಉಂಟಾದ ಜಲಪ್ರಳಯ ಮತ್ತು ಭೂಕುಸಿತ ಇವರ ಕೃಷಿ ಬದುಕನ್ನು ಆಫೋಷನ ತೆಗೆದುಕೊಂಡಿದೆ. ಬೆಟ್ಟಗಳು ಸಂಪೂರ್ಣ ಕುಸಿದು ಬಂದ ಕಾರಣ ಹೆಕ್ಟೇರ್ ಗಟ್ಟಲೆ ಅಡಕೆ, ಕಾಫಿ ತೋಟಗಳು ನಾಶವಾಗಿದೆ. ತಿಂಗಳುಗಟ್ಟಲೆ ಕೆಸರು ನೀರು, ಮಣ್ಣು ತುಂಬಿ ತೋಟಗಳು ನಾಮಾಶೇಷವಾಗಿದೆ. ವಿಪರೀತ ಮಳೆಯೋ, ಪ್ರಕೃತಿಯ ವೈಪರೀತ್ಯವೋ ಎಂಬಂತೆ ಇದ್ದ ಅಡಕೆ ಮರಗಳಲ್ಲಿ ಅಡಕೆಯೇ ಇಲ್ಲ ಹಿಂಗಾರವು ಉದುರಿ ಬಿದು ಅಡಕೆ ಮರಗಳು ಬಾಡಿದಂತೆ ಕಾಣುತ್ತದೆ, ಕೆಲವೆಡೆ ಅಡಕೆ, ಕಾಫಿ ಗಿಡಗಳು ಸಾಯುತಿದೆ. ಅನ್ನದ ಬಟ್ಟಲು ತುಂಬುತ್ತಿದ್ದ ಭತ್ತ ಬೇಸಾಯವೂ ಇಲ್ಲದಂತಾಗಿದೆ. ಇಡೀ ವರ್ಷ ಊಟ ಮಾಡಲು ಸಾಕಾಗುತ್ತಿದ್ದ ಭತ್ತ ಕೃಷಿ ಮಳೆಗೆ ಕೊಚ್ಚಿಹೋದ ಕಾರಣ ಅಕ್ಕಿಯಲ್ಲಿ ಸ್ವಾವಲಂಬನೆ ಪಡೆದಿದ್ದ ಕುಟುಂಬಗಳು ಇಂದು ಪೇಟೆಯಿಂದ ಅಕ್ಕಿ ತರುವ ಸ್ಥಿತಿ ಉಂಟಾಗಿದೆ. ಇನ್ನು 32 ಕ್ವಿಂಟಲ್ ಅಡಕೆ ದೊರೆಯುತ್ತಿದ್ದ ಎರಡನೇ ಮೊಣ್ಣಂಗೇರಿಯ ಜಯರಾಮ ಅವರಿಗೆ ಈ ವರ್ಷ ಸಿಕ್ಕಿದ್ದು ಕೇವಲ ಒಂದು ಕ್ವಿಂಟಲ್ ಅಡಕೆ ಮಾತ್ರ. ಕುಸಿದ ಗುಡ್ಡದೊಂದಿಗೆ ಕೊಚ್ಚಿ ಹೋದ ಇವರ ತೋಟ ಇದ್ದಲ್ಲಿ ಈಗ ಕಾಣುವುದು ಪಾತಾಳದಂತೆ ಕಾಣುವ ಪ್ರಪಾತಗಳು ಮಾತ್ರ. ಮಳೆಗಾಲದಲ್ಲಿ ಜಲಸಾಗರವೇ ಹರಿದರೂ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ಜಲಕ್ಷಾಮ ಎದುರಾಗಿತ್ತು ಎಂಬುದು ಇನ್ನೊಂದು ವಿಚಿತ್ರ.

ಮೊದಲ ಮಳೆಗೇ ಢವ..ಢವ:

ಮೊನ್ನೆ ತಾನೆ ಬೇಸಿಗೆಯಲ್ಲಿ ಸುಮಾರು ಒಂದೂವರೆ ತಾಸು ಸುರಿದ ಮಳೆ ಮೊಣ್ಣಂಗೇರಿ ಮತ್ತು ಜೋಡುಪಾಲವನ್ನು ಮತ್ತೆ ನಲುಗಿಸಿದೆ. ಆರ್ಭಟಿಸಿ ಸುರಿದ ಮಳೆಯು ಜನರ ಎದೆಯಲ್ಲಿ ಭಯವನ್ನು ಸೃಷ್ಠಿಸಿತು. ಅಲ್ಲಲ್ಲಿ ಮಣ್ಣು, ಕಲ್ಲುಗಳು ಕೊಚ್ಚಿ ಹೋಗಿದೆ ಬಿರುಕು ಬಿಟ್ಟಿದ್ದ ಬೆಟ್ಟ ಗುಡ್ಡಗಳು ಅಲ್ಲಲ್ಲಿ ಜರಿದು ಬೀಳಲು ಆರಂಭಿಸಿದೆ. ಕಳೆದ ವರ್ಷದ ಭಯಾನಕ ಸ್ಥಿತಿ ಮತ್ತೆ ಮರುಕಳಿಸಿತ್ತು. ಭೂಮಿಯ ಅಡಿಯಲ್ಲಿ ಬೆಟ್ಟ ಗುಡ್ಡಗಳಿಂದ ಭಯಾನಕ ಶಬ್ದ ಕೇಳಿ ಬರುತ್ತಿತ್ತು ಎನ್ನುತ್ತಾರೆ ಮೊಣ್ಣಂಗೇರಿಯ ವಾರಿಜಾ ವೆಂಕಪ್ಪ. ನಮ್ಮದೆಲ್ಲವನ್ನೂ ಬಿಟ್ಟು ಮತ್ತೆ ಮನೆ ಬಿಟ್ಟು ಹೋಗಾಬೇಕಾದ ಸ್ಥಿತಿ ಬರಬಹುದು ಎಂಬ ಆತಂಕ ಇದೆ. ಆದರೆ ಹೋಗುವುದಾದರು ಎಲ್ಲಿಗೆ ಎಂಬ ಪ್ರಶ್ನೆ ಕಾಡುತಿದೆ ಎನ್ನುತ್ತಾರವರು. ಸೀಳಿ ಹೋಗಿರುವ ಕಡಿದಾದ ಬೆಟ್ಟ ಗುಡ್ಡಗಳು, ಗುಡ್ಡಗಳು ಕೊಚ್ಚಿ ಹೋಗಿ ಸೃಷ್ಠಿಯಾಗಿರುವ ಪ್ರಪಾತಗಳು ಹೀಗೆ ಎಲ್ಲಿ ನೋಡಿದರೂ ಈ ಪ್ರದೇಶದ ಚಿತ್ರಣವೇ ಮನ ಕಲಕುತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ
September 8, 2026
10:02 PM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ
September 8, 2026
9:38 PM
by: ದ ರೂರಲ್ ಮಿರರ್.ಕಾಂ
‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror