ಸುಳ್ಯ: ಕೊರೋನಾ ಮಹಾ ಮಾರಿ ಇಡೀ ಜಗತ್ತನ್ನೇ ಆವರಿಸಿರುವ ಇಂದಿನ ದಿನಗಳಲ್ಲಿ ಬದುಕೇ ಆನ್ ಲೈನ್ ಆಗಿ ಪರಿವರ್ತನೆಯಾಗಿದೆ. ಬೆರಳ ತುದಿಯಲ್ಲಿ ಜಗತ್ತನ್ನು ಒಂದಾಗಿಸುವ ಆನ್ಲೈನ್ ವೇದಿಕೆ, ಸಾಮಾಜಿಕ ಜಾಲತಾಣಗಳು ಬದುಕಿನ ಭಾಗವೇ ಆಗಿದೆ. ಸಂವಹನ, ವ್ಯವಹಾರ, ಶಿಕ್ಷಣ ಎಲ್ಲವೂ ಆನ್ಲೈನ್ ಆಗಿರುವಾಗ ಬದುಕಿನ ಸಂಭ್ರಮವಾದ ಹಬ್ಬವನ್ನು ಕೂಡ ಆನ್ಲೈನ್ ಮೂಲಕ ಆಚರಿಸಲು ಮುಂದಾಗಿರುವುದು ಹೊಸ ಪ್ರಯೋಗ. ಸುಳ್ಯದ ಉತ್ಸಾಹಿ ಯುವಕರ ತಂಡ ಸೇರಿ ಆನ್ ಲೈನ್ ಮೂಲಕ ವಿಶ್ವ ಅರೆಭಾಷೆ ಹಬ್ಬವನ್ನು ಆಚರಿಸಲು ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕೊಡಗು ಜಿಲ್ಲೆ, ಕಾಸರಗೋಡು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜನರ ಭಾಷೆಯಾದ ಅರೆ ಭಾಷೆಗೆ ತನ್ನದೇ ಆದ ವಿಶೇಷ ಭಾಷಾ ಶೈಲಿ, ಸಂಸ್ಕೃತಿ, ಆಚಾರ ವಿಚಾರಗಳಿವೆ. ಅರೆಭಾಷೆಯ ಸಂಸ್ಕೃತಿ ಮತ್ತು ಬದುಕನ್ನು ಬಿಂಬಿಸುವ ಅರೆಭಾಷೆ ಹಬ್ಬವನ್ನು ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿಸಿ ಆಟಿ ತಿಂಗಳು (ಕರ್ಕಾಟಕ)18 ಅಂದರೆ ಆ.3ರಂದು ನಡೆಸಲಾಗುತ್ತದೆ.
ಹಬ್ಬದ ಆಚರಣೆ ಹೇಗೆ: ಹಬ್ಬಗಳು ಅಂದರೆ ಸಂಭ್ರಮ. ತಾವು ಇರುವಲ್ಲಿಯೇ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಒಟ್ಟಾಗಿ ಸಂಭ್ರಮಿಸುವುದು ಅರೆಭಾಷೆ ಹಬ್ಬದ ಕಲ್ಪನೆ. ಆಂಗಿಕ ಮಲ್ಟಿ ಮೀಡಿಯಾ ಎಂಬ ಫೇಸ್ ಬುಕ್ ಪೇಜ್ ಮೂಲಕ ವಿಶ್ವದ ಎಲ್ಲಾ ಅರೆಭಾಷಿಕರನ್ನೂ ಒಂದೇ ವೇದಿಕೆಯಡಿಯಲ್ಲಿ ತರುವುದು ಉದ್ದೇಶ. ಗಣ್ಯರು, ಸಾಹಿತಿಗಳು, ಕಲಾವಿದರು ಎಲ್ಲರೂ ಸೇರಿ ವಿವಿಧ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. 20 ಮಂದಿ ಪ್ರಮುಖರು ಅರೆ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುವರು. ವಿವಿಧ ವಿಷಯಗಳ ಬಗ್ಗೆ ಪ್ರಮುಖರು ಫೇಸ್ ಬುಕ್ ಲೈವ್ನಲ್ಲಿ ಅಥವಾ ರೆಕಾರ್ಡ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಇವರ ಅಭಿಪ್ರಾಯಗಳನ್ನು ದಾಖಲಿಸುವರು. ಅಲ್ಲದೆ ಅರೆಭಾಷೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಕಥೆ, ಕವನ, ಹಾಡು, ನೃತ್ಯ, ಚಿತ್ರ ರಚನೆಗೆ ಅವಕಾಶ ಇದೆ. ಆಸಕ್ತರು ತಮ್ಮ ರಚನೆಗಳನ್ನು ಫೇಸ್ ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಬಹುದು. ಅಥವಾ ರೆಕಾರ್ಡ್ ಮಾಡಿ ಸಂಘಟಕರ ವಾಟ್ಸಾಪ್ಗೆ ಕಳಿಸಿದರೆ ಸಂಘಟಕರೇ ಅಪ್ ಲೋಡ್ ಮಾಡಲಿದ್ದಾರೆ. ಒಟ್ಟಿನಲ್ಲಿ ದಿನ ಪೂರ್ತಿ ಫೇಸ್ ಬುಕ್ ವೀಕ್ಷಕರಿಗೆ ಹಬ್ಬದ ರಸದೌತಣವನ್ನು ಉಣ ಬಡಿಸಲಿದೆ.
ವಿವಿಧ ಸ್ಪರ್ಧೆಗಳು: ಅರೆ ಭಾಷೆ ಹಬ್ಬಕ್ಕೆ ಮೆರುಗು ಹೆಚ್ಚಿಸಲು ಹಲವು ಸ್ಪರ್ಧೆಗಳನ್ನೂ ಏರ್ಪಡಿಲಾಗಿದೆ. ಮೊಬೈಲ್ ಫೋಟೋಗ್ರಫಿ ಸ್ಪರ್ಧೆ, ವಾಟ್ಸಾಪ್ ಗಾದೆ ಸಂಗ್ರಹ ಸ್ಪರ್ಧೆ `ಗಾದೆನ ಜೊಂಪೆ, ಅರೆಭಾಷೆ ಕಾರ್ಡ್ ಕಥೆ ಸ್ಪರ್ಧೆ, ಸಾಂಪ್ರದಾಯಿಕ ಕೊಡಗು ವಾಲಗದ ವಾಟ್ಸಾಫ್ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಗುವುದು. ಈ ರಚನೆಗಳು ಕೂಡ ಹಬ್ಬದ ದಿನ ಆಂಗಿಕ ಫೇಸ್ಬುಕ್ ಪೇಜ್ನಲ್ಲಿ ಪ್ರದರ್ಶನಗೊಳ್ಳಲಿದೆ. ಆಂಗಿಕ ಮಲ್ಟಿ ಮೀಡಿಯ, ಸೂರಡಿ ಬಳಗ, ಜೆಸಿಐ ಸುಳ್ಯ ಸಿಟಿ, ಅರೆಭಾಷೆ ಪರಿಷತ್ತು ವಾಟ್ಸಾಫ್ ಗುಂಪು, ನಾಟ್ಯ ಮಿಲನ ಟ್ರಸ್ಟ್, ಅಮರ ಸುಳ್ಯ ಸಂಘಟನಾ ಸಮಿತಿ ಮತ್ತಿತರ ಸಂಘಟನೆಗಳು ಒಟ್ಟು ಸೇರಿ ಹಬ್ಬವನ್ನು ಆಯೋಜಿಸಿದೆ.
ಕೊರೋನಾ ಭೀತಿಯಿಂದ ಸ್ಥಗಿತವಾದ ನಮ್ಮ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತೆ ಜೀವ ತುಂಬಬೇಕು. ಎಲ್ಲಾ ಭೀತಿಯನ್ನೂ ಮೆಟ್ಟಿನಿಂತು ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳು ಮತ್ತೆ ಅರಳಬೇಕು ಎಂಬ ದೃಷ್ಠಿಯಿಂದ ವಿಶ್ವ ಅರೆಭಾಷೆ ಹಬ್ಬವನ್ನು ಹಮ್ಮಿಕೊಂಡಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಹಬ್ಬ ಆಚರಿಸಲು ಸಾಧ್ಯವಿಲ್ಲ. ಆದುದರಿಂದ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿಸಿ ಹಬ್ಬ ನಡೆಸಲು ಯೋಜನೆ ರೂಪಿಸಿದ್ದೇವೆ – ಲೋಕೇಶ್ ಊರುಬೈಲು , ಆನ್ಲೈನ್ ಅರೆಭಾಷೆ ಹಬ್ಬದ ಸಂಘಟಕ Face book Link : https://www.facebook.com/Angika-Multimedia-113266047128031/
ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…
ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…
2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…
ಹೆಚ್ಚುತ್ತಿರುವ ಉಷ್ಣತೆ ಕೃಷಿ, ಜಾನುವಾರು ಮತ್ತು ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು,…
ರಾಜ್ಯದಲ್ಲಿ ಏಪ್ರಿಲ್ 26ರಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇದೆ.…
ರಾಜ್ಯದಲ್ಲಿ ಬಿಸಿಲಿನ ನಡುವೆ ಏಪ್ರಿಲ್ 25-26ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ. ಕರಾವಳಿ,…