ನವದೆಹಲಿ: ಇಸ್ರೋದ ಹೆಮ್ಮೆಯ ಚಂದ್ರಯಾನ 2 ಯೋಜನೆಯಲ್ಲಿ ಕೆಲವು ವೈಫಲ್ಯವಾಗಿರಬಹುದು. ಆದರೆ ಅದೇ ಮುಕ್ತಾಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ಭಾರತ ಈಗಾಗಲೇ ಹಲವು ಸುಧಾರಿತ ಉಪಗ್ರಹಗಳ ಉಡಾವಣೆಗೆ ಚಿಂತನೆ ನಡೆಸುತ್ತಿದೆ. ಚಂದ್ರಯಾನ 2 ರ ಬಗ್ಗೆ ನೀವೆಲ್ಲ ಕೇಳಿದ್ದೀರಿ. ಅದು ತಾಂತ್ರಿಕವಾಗಿ ಕೆಲವು ವೈಫಲ್ಯಗಳನ್ನು ಕಂಡಿರಬಹುದು. ಆದರೆ ಅದರ ಅಧ್ಯಾಯ ಇನ್ನೂ ಮುಕ್ತಾಯವಾಗಿಲ್ಲ. ನಮ್ಮಲ್ಲಿ ಭರವಸೆ ಉಳಿದಿದೆ ಎಂದು ಶಿವನ್ ಹೇಳಿದರು. ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಸಂಶೋಧನೆ ನಡೆಸಲು ಇಸ್ರೋ ತನ್ನೆಲ್ಲ ಅನುಭವ, ಜ್ಞಾನವನ್ನೂ ಉಪಯೋಗಿಸಲಿದೆ, ಜೊತೆಗೆ ಆ ವೈಫಲ್ಯ ಮುಂದೆಂದೂ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲಿದೆ ಎಂದು ಶಿವನ್ ಹೇಳಿದರು. ದೆಹಲಿ ಐಐಟಿಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು.
ಚಂದ್ರಯಾನ 2 ರ ನಮ್ಮ ಯೋಜನೆಯ ಉದ್ದೇಶ ಸಂಪೂರ್ಣ ಯಶಸ್ವಿಯಾಗದೆ ಇದ್ದರೂ 95 % ಅದು ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದ ಉದ್ದಕ್ಕೂ ಸುತ್ತುತ್ತಿರುವ ಆರ್ಬಿಟರ್ ಈಗಲೂ ಚಂದ್ರನ ಅಧ್ಯಯನ ನಡೆಸುತ್ತಿದೆ. ಸಾಕಷ್ಟು ಅಗತ್ಯ ಮಾಹಿತಿಯನ್ನು ರವಾನಿಸುತ್ತಿದೆ ಎಂದು ಕೆ ಶಿವನ್ ಹೇಳಿದರು.
ಇಸ್ರೋದ ಮುಂದಿನ ಮಹತ್ವಾಕಾಂಕ್ಷಿ ಯೋಜನೆ ಎಂದರೆ ಚಂದ್ರನ ಸಮೀಪಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳಿಸುವುದು, ಜೊತೆಗೆ ಮಾನವ ಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳಿಸುವುದು. ಸದ್ಯದಲ್ಲೇ ಈ ಎರಡು ಮಹತ್ವಾಕಾಂಕ್ಷಿ ಯೋಜನೆಯನ್ನು ಇಸ್ರೋ ಸಾಕಾರಗೊಳಿಸಲಿದೆ ಎಂದು ಅವರು ಹೇಳಿದರು.
ಯಶಸ್ವಿಯಾಗಲು ಟಾಪರ್ ಆಗಬೇಕಿಲ್ಲ: ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಶಿವನ್, “ಜೀವನದಲ್ಲಿ ಯಶಸ್ವಿಯಾಗಲು ನೀವು ಅತೀ ಬುದ್ಧಿವಂತರಾಗಬೇಕಿಲ್ಲ, ಟಾಪರ್ ಆಗಬೇಕಿಲ್ಲ, ನೀವು ಅತ್ಯುತ್ತಮ ಗ್ರೇಡ್ ಪಡೆಯಬೇಕಿಲ್ಲ. ನಿಮ್ಮ ಮುಂದಿರುವ ಅಡೆತಡೆ, ವೃಥಾ ಕಾಲಹರಣದ ಕೆಲಸಗಳನ್ನು ಬದಿಗಿಟ್ಟು ಒಂದೇ ಕಡೆ ಗಮನವಿಡುವುದನ್ನು ಕಲಿಯಬೇಕು” ಎಂದು ಶಿವನ್ ಹೇಳಿದರು. ನಿಮ್ಮ ಆಸಕ್ತಿ ಪ್ರತಿಭೆಯನ್ನು ಗುರುತಿಸಿ. ಮತ್ತೊಬ್ಬರನ್ನು ನಕಲು ಮಾಡಬೇಡಿ. ನಿಮಗೆ ಯಾವುದು ಆಸಕ್ತಿಯೋ ಅದನ್ನು ಮಾಡಿ, ಮತ್ತೊಬ್ಬರು ಮಾಡಿದ್ದನ್ನು ಮಾಡಿದರೆ ನೀವೂ ಕಾಮೆಡಿಯನ್ ಆಗುತ್ತೀರಿ ಅಷ್ಟೆ. ನಿಮಗೆ ಯಾವುದು ಇಷ್ಟ, ಮತ್ತು ನಿಮಗೆ ಯಾವುದು ಸೂಕ್ತ ಎಂಬುದನ್ನು ಅರ್ಥ ಮಾಡಿಕೊಂಡು ಆ ಹಾದಿ ಹಿಡಿಯಿರಿ ಎಂದು ಸಹ ಶಿವನ್ ಈ ಸಂದರ್ಭದಲ್ಲಿ ಹೇಳಿದರು.
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…