ಮಡಿಕೇರಿ: “ಊರಿಗೊಂದು ಜಾತಿ-ನೀತಿ, ಧರ್ಮ ಇರಬಹುದು, ಆದರೆ ನೀರಿಗೆ ಯಾವುದೇ ಜಾತಿಯೂ ಇಲ್ಲ-ನೀತಿಯೂ ಇಲ್ಲ ಧರ್ಮಗಳಿಲ್ಲ” ಈ ಮಾತಿಗೆ ಮತ್ತಷ್ಟು ಪುಷ್ಠಿ ನೀಡಿದ್ದು ಕಳೆದ ವಾರ ನಾಡಿನೆಲ್ಲೆಡೆ ಕಾಡಿದ ಮಹಾ ಪ್ರವಾಹ. ಊರಿಗೆ ಊರೇ ಕೊಚ್ಚಿಕೊಂಡು ಹೋಗುವಾಗ ಪ್ರವಾಹದ ನೀರು ಯಾರನ್ನೂ ಜಾತಿ ಆಧಾರದಲ್ಲಿ ಸೆಳೆದುಕೊಂಡು ಹೋಗಲಿಲ್ಲ. ಇದೇ ಕಾರಣಕ್ಕೆ ಇಂದು ಪ್ರಕೃತಿ ಕಲಿಸಿದ ಪಾಠಕ್ಕೆ ತಲೆಬಾಗಿ ಭಾವೈಕ್ಯತೆಯ ಪ್ರತಿಧ್ವನಿಗಳು ಬಲಗೊಳ್ಳುತ್ತಿವೆ.
ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಂಬ ಮಠದ ಮಠಾಧಿಪತಿ ಶ್ರೀಬೋಧ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ ಸಾಮರಸ್ಯದ ಸಮಾಜದಿಂದ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮಳೆಹಾನಿ ಸಂತ್ರಸ್ತರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದರು.
ಕೊಡಗು ಜಿಲ್ಲಾ ಎಸ್ಕೆಎಸ್ಎಸ್ಎಫ್ ಸಮಿತಿಯ ಪ್ರಮುಖರಾದ ಅಬ್ದುಲ್ಲಾ ಫೈಜಿ ಹಾಗೂ ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಂಬ ಮಠದ ಮಠಾಧಿಪತಿ ಶ್ರೀಬೋಧ ಸ್ವರೂಪಾನಂದ ಸ್ವಾಮೀಜಿಯವರ ನೇತೃತ್ವದ ತಂಡ ನೆಲ್ಲಿಹುದಿಕೇರಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿತು. ಶ್ರೀಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ನೆರೆ ಸಂತ್ರಸ್ತರಿಗೆ ಪರಸ್ಪರ ಕೈಜೋಡಿಸಿ ಸಹೋದರತೆಯನ್ನು ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಎಸ್ಕೆಎಸ್ಎಸ್ಎಫ್ನ ಮಾಧ್ಯಮ ಸಂಚಾಲಕ ಸಿ.ಎಂ.ಹಮೀದ್ ಮೌಲವಿ, ಮಹಾಮಳೆಯ ಪ್ರವಾಹಕ್ಕೆ ತುತ್ತಾಗಿ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಮಹಾಮಳೆಯಿಂದಾಗಿ ತಮ್ಮ ಅತ್ಯವಶ್ಯಕವಾದ ದಾಖಲಾತಿ ಕಳೆದುಕೊಂಡ ಸಂತ್ರಸ್ತರಿಗೆ ಜಿಲ್ಲಾ ಆಡಳಿತ ಮತ್ತು ಸರಕಾರ ಶಾಶ್ವತವಾದ ಪರಿಹಾರವನ್ನು ಒದಗಿಸಿಕೊಡಬೇಕು ಎಂದರು. ನೆರೆಸಂತ್ರಸ್ತರು ಹೊಂದಿರುವ ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಡುವುದು ಸೂಕ್ತವೆಂದ ಅವರು, ಯಾರು ಕೂಡ ಆತಂಕಕ್ಕೆ ಒಳಗಾಗಬಾರದು ಎಂದರು. ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ಪರಿಹಾರ ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿ.ಎಂ.ಹಮೀದ್ ಮೌಲವಿ, ಎಲ್ಲರು ಒಗ್ಗಟ್ಟಾಗಿ, ಸಹಬಾಳ್ವೆಯಿಂದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಬೇಕೆಂದು ಕರೆ ನೀಡಿದರು.
ಶಾರದಾಂಬ ಮಠದ ಸ್ವಾಮೀಜಿಗಳೊಂದಿಗೆ ಕೈಜೋಡಿಸಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಅವಕಾಶ ಲಭಿಸಿರುವುದು ಸಂತೋಷದ ವಿಚಾರವಾಗಿದೆ. ಕಳೆದ ವರ್ಷ ಮಹಾಮಳೆಗೆ ತುತ್ತಾಗಿ ಸಂಕಷ್ಟದಲ್ಲಿ ಸಿಲುಕಿದ ಸಂತ್ರಸ್ತರಿಗೆ ಸುಂಟಿಕೊಪ್ಪದ ಖದೀಜಾ ಉಮ್ಮ ಮದರಸ, ರಾಮಮಂದಿರ ಹಾಗೂ ಚರ್ಚ್ನಲ್ಲಿ ಆಶ್ರಯವನ್ನು ನೀಡಿ ಸೌಹಾರ್ದತೆಯನ್ನು ಮೆರೆಯಲಾಗಿತ್ತು. ಆ ಮೂಲಕ ಇಡೀ ದೇಶಕ್ಕೆ ಸಾಮರಸ್ಯದ ಸಂದೇಶವನ್ನು ರವಾನಿಸಲಾಗಿತ್ತು. ಈ ಬಾರಿಯೂ ಒಗ್ಗಟ್ಟಿನಿಂದ ಕೈಜೋಡಿಸಿ ಮಾನವೀಯತೆಯನ್ನು ಮೆರೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಸಿ.ಎಂ.ಹಮೀದ್ ಮೌಲವಿ ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಎಸ್ವೈಎಸ್, ಎಸ್ಕೆಎಸ್ಎಸ್ಎಫ್ ಸಂಘಟನೆಯ ಪ್ರತಿನಿಧಿಗಳು ನೆರೆ ಪೀಡಿತ ಪ್ರದೇಶವಾದ ನೆಲ್ಲಿಹುದಿಕೇರಿ, ನಲ್ವತ್ತೇಕರೆ, ಕೊಂಡಂಗೇರಿ, ಚೆರಿಯಪರಂಬು, ಬೇತ್ರಿ, ಕೋರಂಗಾಲ ಮುಂತಾದ ಕಡೆಗೆ ಭೇಟಿ ನೀಡಿ ಅಲ್ಲಿನ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಎಸ್ಕೆಎಸ್ಎಸ್ಎಫ್ ರಾಜ್ಯ ಕಾರ್ಯದರ್ಶಿ ಆರಿಫ್ ಫೈಜಿ, ಸದಸ್ಯ ಇಕ್ಬಾಲ್ ಮೌಲವಿ, ಎಸ್ವೈಎಸ್ ಕಾರ್ಯದರ್ಶಿ ಉಮ್ಮರ್ ಫೈಜಿ, ಸದಸ್ಯರಾದ ಹಸನ್ ಕುನ್ನಿ ಹಾಜಿ, ಸುಂಟಿಕೊಪ್ಪದ ಎಸ್.ಎಂ.ಮೊಹಮ್ಮದ್, ಅಬೂಬಕ್ಕರ್, ರಫೀಕ್, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಗೋಪಾಲ ಜಿ.ಸ್ವಾಮಿ, ಪಂಚವರ್ಷ ಆನಂದ ಜಿ, ಸ್ವಯಂ ಸೇವಕ ಸುಭೋದ ರಾವ್ ಪವನ್ ಮತ್ತಿತರ ಪ್ರಮುಖರು ಹಾಜರಿದ್ದರು.
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…