ಆಕಾಶದಲ್ಲಿ ಹಾರುವ ಹಕ್ಕಿಗೆರಡೇ ರೆಕ್ಕೆಗಳು. ಎಲ್ಲಿ ಹೋಗಬೇಕೋ ಅಲ್ಲಿಗೆ ಆರಾಮವಾಗಿ ಹಾರಿಕೊಂಡು ಹೋಗುತ್ತದೆ. ಹಕ್ಕಿ ಗಳು ಹಾರಿದಂತೆ ತಾನು ಹಾರಬೇಕೆಂದು ಹೊರಟ ಆಮೆಯ ಕಥೆಯನ್ನು ಸಣ್ಣ ತರಗತಿಯಲ್ಲಿ ಕಲಿತಿದ್ದೇವೆ.
ಆಕಾಶದಲ್ಲಿ ಆಡುವ ಹಕ್ಕಿಗಳ ಗೆಳೆತನ ಮಾಡಿದರೆ ತನಗೂ ಸ್ವಚ್ಛಂದವಾಗಿ ಹಾರಲು ಕಲಿಸಿಯಾವು ಎಂಬ ಅಭಿಲಾಷೆ ಆಮೆಯದು. ನೀರಿನಲ್ಲಿ ಮೀನು ಹಿಡಿದು ತಿನ್ನುತ್ತಿದ್ದ ಕೊಕ್ಕರೆಗಳ ಗೆಳೆತನವನ್ನು ಆಮೆ ಮಾಡುತ್ತದೆ. ಕೆಲವು ದಿನಗಳ ಬಳಿಕ ತನ್ನ ಮನದಾಸೆಯನ್ನು ಅವುಗಳ ಬಳಿ ಹಂಚಿಕೊಳ್ಳುತ್ತದೆ. ಆಮೆಯ ಆಸೆಯನ್ನು ಕೇಳಿ ಕೊಕ್ಕರೆಗಳು ನಕ್ಕು ಬಿಡುತ್ತವೆ. ಇದೆಲ್ಲ ಆಗದ ವಿಷಯ ಎಂದು ಮಾತು ಮರೆಸುತ್ತವೆ. ಆದರೆ ಹಠ ಬಿಡದ ಆಮೆ ನೀವಿಬ್ಬರು ಸೇರಿ ಕರೆದು ಕೊಂಡು ಹೋಗಿ ಎನ್ನುತ್ತದೆ. ನಾವು ಹೇಳಿದಂತೆ ಕೇಳಿದರೆ ಮಾತ್ರ ಕರೆದುಕೊಂಡು ಹೋಗುತ್ತೇವೆ. ಯಾರ ಮಾತಿಗೂ ಕಿವಿಕೊಡ ಬಾರದು , ಮಾತನಾಡಬಾರದು ,ಎಂದು ಕೊಕ್ಕರೆಗಳು ಷರತ್ತು ಹಾಕಿದವು. ಸರಿ ಹೇಗಾದರು ಆಕಾಶದಲ್ಲಿ ಹಾರಿದರಾಯಿತು ಎಂದು ಆಮೆ ಕನಸು ಕಾಣ ತೊಡಗಿತು. ಕೊಕ್ಕರೆಗಳು ಉದ್ದದ ಕೋಲೊಂದನ್ನು ತೆಗೆದುಕೊಂಡು ಬಂದವು. ಮಧ್ಯದಲ್ಲಿ ಆಮೆಯನ್ನು ಬಾಯಿಯಲ್ಲಿ ಕಚ್ಚಿಕೊಳ್ಳಲು ಹೇಳಿದವು. ಯಾರು ಮಾತನಾಡಿದರೂ ಉತ್ತರಿಸುವ ಗೌಜಿಗೆ ಹೋಗಬಾರದು ಎಂದು ಮತ್ತೆ ಮತ್ತೆ ಎಚ್ಚರಿಸಿದುವು . ನಿಧಾನಕ್ಕೆ ಎರಡೂ ಕೊಕ್ಕರೆಗಳೂ ಹಾರಿದುವು. ಮೇಲೆ ಮೇಲೆ ಹಾರಿದಂತೆ ಆಮೆ ಖುಷಿಯಿಂದ ಕೆಳಗೆ ನೋಡತೊಡಗಿತು. ಓಡಾಡುವ ಜನರು, ಪ್ರಾಣಿಗಳು, ಮರಗಿಡಗಳು ಕೆರೆ ತೊರೆಗಳನ್ನು ನೋಡುತ್ತಾ ಸಂತೋಷ ಪಟ್ಟಿತು. ಅಷ್ಟರಲ್ಲಿ ಜನರು ಆಮೆಯನ್ನು ನೋಡಿ ನಗಲಾರಂಭಿಸಿದರು. ತಾಳ್ಮೆ ಕಳೆದು ಕೊಂಡ ಆಮೆ ಬೈಯಲೆಂದು ಬಾಯಿ ತೆರೆದೇ ಬಿಟ್ಟಿತು. ನೋಡ ನೋಡುತ್ತಿದ್ದಂತೆ ಕೆಳಗೆ ಬಿದ್ದು ಬಿಟ್ಟಿತು. ಗೆಳೆಯನ ಅಂತ್ಯವನ್ನು ಕೊಕ್ಕರೆಗಳು ಅಸಹಾಯಕರಾಗಿ ನೋಡುವಂತಾಯಿತು. ಆಮೆ ನೆಲದಲ್ಲಿ, ನೀರಿನಲ್ಲಿ ಜೀವಿಸುವ ಪ್ರಾಣಿ. ಅಲ್ಲಿ ಅದು ಆರಾಮವಾಗಿ ಬೇಕೆಂದಲ್ಲಿ ತಿರುಗಿ ಜೀವಿಸುವ ಸಾಮರ್ಥ್ಯವನ್ನು ಪಡೆದಿದೆ. ಆದರೆ ಆಕಾಶದಲ್ಲಿ ಹಾರುವ ಆಸೆಗೇನು ಮಾಡುವುದೂ? ಆಮೆಯ ದೈಹಿಕ ರಚನೆ ಆಕಾಶದಲ್ಲಿ ಹಾರಲು ಯೋಗ್ಯವಾದುದಲ್ಲ. ಕೊಕ್ಕರೆಗಳ ಮೊರೆ ಹೋದುದು, ತನ್ನ ಸ್ವಾರ್ಥಕ್ಕಾಗಿ. ತನ್ನ ಆಸೆಗೆ ತಾನೇ ಬಲಿಯಾದ ಕಥೆ ನಮಗೆಲ್ಲಾ ಜೀವನ ಪಾಠವನ್ನು ಗಾಢವಾಗಿ ಕಲಿಸಿದೆ.
ಈ ಕಥೆ ನಮ್ಮ ಜೀವನಕ್ಕೆ ಬಹಳ ಹತ್ತಿರವಾದುದು. ಬದುಕಿನಲ್ಲಿ ನಾವು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತವೆ. ನಮ್ಮ ಯೋಚನೆಗಳು ಯಾವಾಗಲೂ ಮೇಲ್ ಸ್ತರದಲ್ಲಿ ಇರುತ್ತವೆ. ದೊಡ್ಡ ದೊಡ್ಡ ಕನಸುಗಳು, ಕಲ್ಪನೆಗಳು. ಆದರೆ ಅವುಗಳ ಬಗ್ಗೆ ಯಾವುದೇ ಸ್ಪಷ್ಟತೇ ಇರುವುದಿಲ್ಲ.ಯೋಜನೆಗಳಿರುವುದಿಲ್ಲ.
ನಾನು IAS, IPS, ಡಾಕ್ಟರ್, ಎಂಜಿನಿಯರಿಂಗ್, ವಿಜ್ಞಾನಿ ಆಗಬೇಕೆಂದಿದ್ದೆ, ಆದರೆ ಕೆಟ್ಟ ಅದೃಷ್ಟ ಎಂದು ತಮ್ಮನ್ನೇ ಬೈದುಕೊಳ್ಳುತ್ತಾರೆ. ಆದರೆ ಇಲ್ಲಿ ಕೈ ಕೊಟ್ಟದ್ದು ಅದೃಷ್ಟ ಮಾತ್ರ ಅಲ್ಲ ಪೂರ್ವ ತಯಾರಿಗಳೂ ಕೂಡ. ನಾವು ಏನೇ ಮಾಡಬೇಕಿದ್ದರೂ ಒಂದು ಸಂಕಲ್ಪ ಬೇಕು. ಏನು ಮಾಡುತ್ತೇವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಬೇಕು. ಅದಕ್ಕೆ ಅಗತ್ಯ ವಾದ ಜ್ಞಾನ ಸಂಪಾದನೆ ಮಾಡಿಕೊಂಡಿರ ಬೇಕು. ಲೋಕ ಜ್ಞಾನವೂ ಬೇಕು. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಗಟ್ಟಿ ಮನಸ್ಸಿರ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಿರೀಕ್ಷೆ ವಾಸ್ತವಕ್ಕೆ ಹತ್ತಿರವಾಗಿರಬೇಕು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel