Advertisement
ಸುದ್ದಿಗಳು

ಬಿಸಿಸಿಐಗೆ ಗಂಗೂಲಿಯೇ ಮಹಾರಾಜ : ಅಮಿತ್ ಷಾ ಪುತ್ರ ಜಯ್ ಷಾ ಕಾರ್ಯದರ್ಶಿ

Share

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಇನ್ನು ಸೌರವ್ ಗಂಗೂಲಿಯೇ ಕಿಂಗ್‌. ಬಿಸಿಸಿಐ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿರುವ 47 ವರ್ಷದ ಸೌರವ್ ಗಂಗೂಲಿ, ಅವಿರೋಧ ಆಯ್ಕೆಯಾಗುವುದು ನಿಶ್ಚಿತವೆನಿಸಿದೆ.

ಅವರೊಂದಿಗೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರ ಜಯ್ ಷಾ ಕಾರ್ಯದರ್ಶಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹೋದರ ಅರುಣ್ ಸಿಂಗ್ ಧುಮಲ್ ಖಜಾಂಚಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಕರ್ನಾಟಕದ ಬ್ರಿಜೇಶ್ ಪಟೇಲ್ ಐಪಿಎಲ್ ಚೇರ್ಮನ್ ಪದವಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಸೋಮವಾರ ಕೊನೇ ದಿನವಾಗಿತ್ತು. ಇವರೆಲ್ಲರೂ ಅ. 23 ರಂದು ನಡೆಯಲಿರುವ ಬಿಸಿಸಿಐ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ ಮತ್ತು ಅಂದೇ ಅಧಿಕೃತವಾಗಿ ಹುದ್ದೆಗಳನ್ನು ಅಲಂಕರಿಸಲಿದ್ದಾರೆ. ಬಿಸಿಸಿಐ ಪದವಿ ಅಲಂಕರಿಸಿದ ಬಳಿಕ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಬಿಸಿಸಿಐ ಚುಕ್ಕಾಣಿ ಹಿಡಿಯುತ್ತಿದ್ದರೂ ಭಾರತ ತಂಡವನ್ನು ಮೈದಾನದಲ್ಲಿ ಮುನ್ನಡೆಸಿದ್ದೇ ತಮ್ಮ ಇದುವರೆಗಿನ ದೊಡ್ಡ ಸಾಧನೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ನಾಯಕತ್ವವನ್ನು ಯಾವ ಸವಾಲು ಕೂಡ ಮೀರಿಸಲಾರದು ಎಂದವರು ಹೇಳಿದ್ದಾರೆ.

6 ದಶಕ ಬಳಿಕ ಕ್ರಿಕೆಟಿಗ ಅಧ್ಯಕ್ಷ..! ಗಂಗೂಲಿ ಕಳೆದ 6 ದಶಕಗಳಲ್ಲಿ ಬಿಸಿಸಿಐ ಅಧ್ಯಕ್ಷರಾಗು ತ್ತಿರುವ ಮೊದಲ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ. ಮಹಾರಾಜ ಕುಮಾರ್ ವಿಜಿಯನಗರಂ 1954-56ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಕೊನೇ ಟೆಸ್ಟ್ ಕ್ರಿಕೆಟಿಗ.

ಕ್ರಿಕೆಟ್ ಆಡಳಿತಕ್ಕೆ ಕೋಲ್ಕತಾ ಮಹಾರಾಜ: ಭಾರತೀಯ ಕ್ರಿಕೆಟ್ ಗೆ ಹೊಸ ದಿಕ್ಕು ತೋರಿದ ನಾಯಕನೇ ಸೌರವ್ ಗಂಗೂಲಿ. ಕೆಚ್ಚೆದೆಯ ನಾಯಕತ್ವದ ಮೂಲಕ ಕ್ರಿಕೆಟ್ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಹೊಸಶಕ್ತಿ ತುಂಬಿದಂತೆಯೇ ಈಗ ಬಿಸಿಸಿಐ ಆಡಳಿತದಲ್ಲೂ ಅವರು ಹೊಸ ಕ್ರಾಂತಿಯನ್ನು ಸೃಷ್ಟಿಸುವ ನಿರೀಕ್ಷೆ ಹರಡಿದೆ.

ಬಂಗಾಳದ ದಾದಾ, ಕೋಲ್ಕತದ ಮಹಾರಾಜ, ಆಫ್​ಸೈಡ್​ನ ದೇವರು ಎಂದೆಲ್ಲಾ ಕರೆಸಿಕೊಳ್ಳುವ ಗಂಗೂಲಿ ಈಗಲೂ ಅಂಥದ್ದೇ ಪ್ರೀತಿಯನ್ನು ಅಭಿಮಾನಿಗಳಲ್ಲಿ ಉಳಿಸಿಕೊಂಡಿದ್ದಾರೆ. ಬಲಿಷ್ಠ ತಂಡಗಳಿಗೆ ಸೆಡ್ಡುಹೊಡೆಯುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಅವರು ಬಲತುಂಬಿದ್ದು ಈಗಲೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹಚ್ಚಹಸಿರಾಗಿದೆ. 1992ರಲ್ಲೇ ಭಾರತ ಪರ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರೂ ಹೆಚ್ಚಿನ ಯಶ ಪಡೆಯದಿದ್ದ ಎಡಗೈ ಬ್ಯಾಟ್ಸ್​ಮನ್ ಗಂಗೂಲಿ, 1996ರಲ್ಲಿ ಲಾರ್ಡ್ಸ್​ನಲ್ಲಿ ಪದಾರ್ಪಣೆಯ ಟೆಸ್ಟ್​ನಲ್ಲೇ ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು. ಬಳಿಕ ಸಚಿನ್ ತೆಂಡುಲ್ಕರ್ ಜತೆಗೆ ಅತ್ಯುತ್ತಮ ಆರಂಭಿಕ ಜೋಡಿಯಾಗಿ ಹೊರಹೊಮ್ಮಿದ್ದ ಗಂಗೂಲಿ, ಮಧ್ಯಮ ವೇಗದ ಬೌಲರ್ ಆಗಿಯೂ ಸಾಕಷ್ಟು ಉಪಯುಕ್ತರಾಗಿದ್ದರು.

ಭಾರತಕ್ಕೆ ವಿದೇಶದಲ್ಲೂ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದನ್ನು ಕಲಿಸಿಕೊಟ್ಟ ಗಂಗೂಲಿ, 2003ರ ಏಕದಿನ ವಿಶ್ವಕಪ್ ಫೈನಲ್​ಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಈ ನಡುವೆ 2001ರಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಸತತ 16 ಟೆಸ್ಟ್ ಗೆಲುವಿನೊಂದಿಗೆ ಬೀಗುತ್ತಿದ್ದ ಆಸ್ಟ್ರೇಲಿಯಾದ ಓಟಕ್ಕೆ ಬ್ರೇಕ್ ಹಾಕಿದ್ದರು. 2004ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಡ್ರಾ ಸಾಧಿಸಿ ಹೊಸ ಪಾರಮ್ಯ ಮೆರೆದಿದ್ದರು. 2004ರಲ್ಲೇ ಪಾಕಿಸ್ತಾನ ಪ್ರವಾಸದ ಸ್ನೇಹ ಸರಣಿಯಲ್ಲೂ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದರು. ಕೋಚ್ ಜಾನ್ ರೈಟ್ ಜತೆಗೂಡಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಹಲವು ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಟ್ಟಿದ್ದರು.

2005ರಲ್ಲಿ ಗ್ರೇಗ್ ಚಾಪೆಲ್ ಕೋಚ್ ಆದಾಗ ಭಿನ್ನಾಭಿಪ್ರಾಯ ಮೂಡಿ ನಾಯಕತ್ವ ಕಳೆದುಕೊಂಡ ಗಂಗೂಲಿ, ಬ್ಯಾಟ್ಸ್​ಮನ್ ಆಗಿ ಮಾತ್ರ ಛಲಬಿಡದೆ ಆಟ ಮುಂದುವರಿಸಿದ್ದರು. 2007ರಲ್ಲಿ ಪಾಕಿಸ್ತಾನ ವಿರುದ್ಧದ ಬೆಂಗಳೂರು ಟೆಸ್ಟ್​ನಲ್ಲಿ ಜೀವನಶ್ರೇಷ್ಠ 239 ರನ್ ಸಿಡಿಸಿ ಬೀಗಿದ್ದರು. 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಗ್ಪುರ ಟೆಸ್ಟ್ ನಲ್ಲಿ ಆಡಿ ಗೌರವಯುತವಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿರ್ಗಮಿಸಿದ್ದರು. ನಿವೃತ್ತಿಯ ನಂತರ ಭಾರತ ತಂಡದ ಕೋಚ್ ಹುದ್ದೆಗೆ ಗಂಗೂಲಿ ಹೆಸರು ಆಗಾಗ ಕೇಳಿಬರುತ್ತಿದ್ದರೂ ಅದರತ್ತ ಗಮನಕೊಡದೆ, ಕ್ರಿಕೆಟ್ ಆಡಳಿತದತ್ತ ಆಸಕ್ತಿ ತೋರಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆ ಪ್ರವೇಶಿಸಿದ ಗಂಗೂಲಿ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಟಗಾರ, ನಾಯಕರಾಗಿ ಕಂಡ ಯಶಸ್ಸನ್ನೇ ಅವರು ಆಡಳಿತದಲ್ಲೂ ಕಾಣುವ ವಿಶ್ವಾಸ ಅಭಿಮಾನಿಗಳದ್ದಾಗಿದೆ.

ಬಿಸಿಸಿಐ ವರ್ಚಸ್ಸು ಸುಧಾರಿಸುವೆ: 

ಬಿಸಿಸಿಐ ವರ್ಚಸ್ಸು ಸುಧಾರಿಸಲು ಪ್ರಮುಖ ಆದ್ಯತೆ ನೀಡುವೆ ಎಂದು ಬಿಸಿಸಿಐನ ನೂತನ ‘ದಾದಾ’ ಆಗುತ್ತಿರುವ ಸೌರವ್ ಗಂಗೂಲಿ ತಿಳಿಸಿದ್ದಾರೆ. ‘ಮಂಡಳಿಯ ಉನ್ನತ ಹುದ್ದೆ ಅಲಂಕರಿಸುತ್ತಿರುವ ಬಗ್ಗೆ ಖುಷಿ ಇದೆ. ನಾನು ದೇಶದ ಪರ ಆಡಿರುವೆ, ರಾಷ್ಟ್ರೀಯ ತಂಡವನ್ನು ಮುನ್ನಡೆಸಿರುವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲು ಪ್ರಯತ್ನಿಸ ಲಾಗುವುದು. ಭಾರತೀಯ ಕ್ರಿಕೆಟ್​ಅನ್ನು ಮತ್ತೊಮ್ಮೆ ಸಹಜ ಸ್ಥಿತಿಗೆ ತರಲಾಗುವುದು. ಅಪೆಕ್ಸ್ ಕೌನ್ಸಿಲ್​ನಲ್ಲಿ ನನ್ನ ಜತೆಗೆ ಕಾರ್ಯನಿರ್ವಹಿಸುವ ಇತರ 8 ಮಂದಿಯ ಜತೆಗೂಡಿ ಬಿಸಿಸಿಐನ ಗತವೈಭವವನ್ನು ಮರಳಿ ತರಲು ಶ್ರಮಿಸಲಾಗುವುದು ಎಂದಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹೆಸರು, ಬಿಸಿಸಿಐ ಅಧ್ಯಕ್ಷ ಪದವಿಯ ರೇಸ್​ನಲ್ಲಿ ಪ್ರಮುಖವಾಗಿ ಕೇಳಿಬಂದಿತ್ತು. ಆದರೆ ಗಂಗೂಲಿ ಅಧ್ಯಕ್ಷನಾಗುವ ಹಿನ್ನಲೆಯಲ್ಲಿ ಐಪಿಎಲ್ ಆಡಳಿತಗೆ ನಾಮಪತ್ರ ಸಲ್ಲಿಸಿದ್ದು ಐಪಿಎಲ್ ಆಡಳಿತ ಮಂಡಳಿಯ ಚೇರ್ಮನ್ ಪದವಿಯನ್ನು ಅಲಂಕರಿಸಲಿದ್ದಾರೆ

ಬಿಸಿಸಿಐ ಅಧ್ಯಕ್ಷ ಪದವಿಯ ಆಕಾಂಕ್ಷಿ ನಾನಾಗಿರಲಿಲ್ಲ. ಬ್ರಿಜೇಶ್ ಪಟೇಲ್ ಅಧ್ಯಕ್ಷರಾಗುವರು ಎಂದೇ ಎಣಿಸಿದ್ದೆ. ಆದರೆ ಭಾನುವಾರ ರಾತ್ರಿ ಕೊನೇಕ್ಷಣದಲ್ಲಿ ಎಲ್ಲವೂ ಬದಲಾಯಿತು. ನಾನು ಹಿಂದೆಂದೂ ಬಿಸಿಸಿಐ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. ಈ ರೀತಿ ಅವಕಾಶ ಕೂಡಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

1 hour ago

ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?

ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…

3 hours ago

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?

ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…

7 hours ago

ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

12 hours ago

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

21 hours ago