Advertisement
Categories: Uncategorized

ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ವಿತರಿಸಿ : ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ : ಡಿಸೆಂಬರ್ ಅಂತ್ಯದೊಳಗೆ ಮನೆಗಳ ಹಸ್ತಾಂತರ

Share

ಮಡಿಕೇರಿ: ಮಳೆಹಾನಿಯಿಂದ ನೊಂದಿರುವ ಸಂತ್ರಸ್ತರಿಗೆ ಮತ್ತಷ್ಟು ನೋವನ್ನು ನೀಡದೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ವಿತರಿಸುವುದರೊಂದಿಗೆ ಆಶ್ರಯವನ್ನು ಕಲ್ಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಕಳೆದ ವರ್ಷದ ಮಳೆಹಾನಿ ಸಂತ್ರಸ್ತರಿಗೆ ನೂತನ ಮನೆಗಳನ್ನು ಹಸ್ತಾಂತರಿಸಲಾಗುವುದೆಂದು ಸಚಿವರು ಇದೇ ಸಂದರ್ಭ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಸೋಮಣ್ಣ, ಸಂತ್ರಸ್ತರು ಹಾಗೂ ರೈತರನ್ನು ಸತಾಯಿಸುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಬಡವರು ಪರಿಹಾರಕ್ಕಾಗಿ ಕಛೇರಿಗೆ ಬಂದಾಗ ಕುಂಟುನೆಪಗಳನ್ನು ಹೇಳದೆ, ನಿಯಮಗಳನ್ನು ಅತಿಯಾಗಿ ಹೇರದೆ ನೋವಿಗೆ ಸ್ಪಂದಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭ ಜಿಲ್ಲೆಯಲ್ಲಿ ಸಂಭವಿಸಿದ ಮಳೆ ಹಾನಿ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಕಳೆದ ವರ್ಷ 20 ಜೀವ ಹಾನಿಗಳಾಗಿದ್ದರೆ, ಈ ಬಾರಿ 16 ಮಾನವ ಜೀವ ಹಾನಿಯಾಗಿದೆ. 4 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರನ್ನು ವಿಶೇಷವಾಗಿ ಪರಿಗಣಿಸಿ, ಇತರ ಮೃತರ ಕುಟುಂಬಗಳಂತೆ ನಾಲ್ವರ ಕುಟುಂಬಕ್ಕೂ ತಲಾ 5 ಲಕ್ಷ ರೂ. ವಿತರಿಸಲು ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ತಿಳಿಸಿದರು.

ಈ ಬಾರಿ 10,996 ಮಂದಿ ಸಂತ್ರಸ್ತರಾಗಿದ್ದು, 2038 ಮನೆಗಳಿಗೆ ಹಾನಿಯಾಗಿದೆ. ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ತಲಾ 25 ಸಾವಿರ ರೂ.ಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 266.52 ಕೋಟಿ ರೂ.ಗಳಷ್ಟು ಬೆಳೆಹಾನಿಯಾಗಿದೆ. ಕಳೆದ ವರ್ಷದ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು 5 ಜಾಗಗಳಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. 633 ಮನೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕೆ.ನಿಡುಗಣೆ ವ್ಯಾಪ್ತಿಯ ಆರ್ ಟಿ ಒ ಕಛೇರಿ ಬಳಿ 4 ಏಕರೆಯಷ್ಟು ಸರ್ಕಾರಿ ಜಮೀನು ಲಭ್ಯವಿದ್ದು, ಸಂತ್ರಸ್ತರಿಗೆ ಹಂಚುವಂತೆ ಮನವಿ ಮಾಡಿದರು. ಸಚಿವ ಸೋಮಣ್ಣನವರು, ನಾಲ್ಕು ಏಕರೆ ಪ್ರದೇಶವನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆ ಕಳೆದುಕೊಂಡ ಸಂತ್ರಸ್ತರು ತಾವು ಈ ಹಿಂದೆ ಇದ್ದ ಸ್ಥಳವೇ ಸುರಕ್ಷಿತವಾಗಿದೆ ಎಂದು ಮನೆ ನಿರ್ಮಿಸಿಕೊಳ್ಳಲು ಮನವಿ ಸಲ್ಲಿಸಿದಲ್ಲಿ ಸುರಕ್ಷಿತ ಜಾಗವಾಗಿದ್ದರೆ ಸರ್ಕಾರ ಅನುದಾನ ನೀಡಲಿದೆ. ಮತ್ತೆ ಅನಾಹುತ ಸಂಭವಿಸಬಹುದಾದ ಪ್ರದೇಶದಲ್ಲಿ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡದೆ ಸರ್ಕಾರದ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಿ ಎಂದು ಸಚಿವ ಸೋಮಣ್ಣ ಸಲಹೆ ನೀಡಿದರು.
ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, 94 ‘ಸಿ’ ಯಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಶೇ.50 ರಷ್ಟನ್ನು ವಿನಾಕಾರಣ ತಿರಸ್ಕರಿಸಲಾಗಿದೆ. ಅಧಿಕಾರಿಗಳು ಮಾನವೀಯತೆಯ ಆಧಾರದಲ್ಲಿ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಹಕ್ಕುಪತ್ರ ನೀಡುವಂತೆ ಸೂಚಿಸಿದರು. ಪೌತಿ ಖಾತೆ ಸಕಾಲದಲ್ಲಿ ಆಗದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಹಶೀಲ್ದಾರ್ ಕಛೇರಿ ವ್ಯಾಪ್ತಿಯಲ್ಲಿ ಬ್ರೋಕರ್‍ಗಳ ಹಾವಳಿ ಹೆಚ್ಚಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಅಪ್ಪಚ್ಚುರಂಜನ್, ಸೋಮವಾರಪೇಟೆ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ವಿಲೇಜ್ ಅಕೌಂಟೆಂಟ್‍ಗಳು ಮದ್ಯಪಾನ ಮಾಡಿ ಕರ್ತವ್ಯ ನಿರ್ವಹಿಸುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯದ ಸಂದರ್ಭ ಮದ್ಯಪಾನ ಮಾಡಿ ಕರ್ತವ್ಯ ನಿರ್ವಹಿಸುವವರನ್ನು ಅಮಾನತುಗೊಳಿಸುವಂತೆ ಸಚಿವ ಸೋಮಣ್ಣ ಆದೇಶಿಸಿದರು. ಗ್ರಾಮ ಪಂಚಾಯತಿ ಅಧಿಕಾರಿಗಳು ಹೆಚ್ಚು ಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕೆಂದ ಸಚಿವ ಸೋಮಣ್ಣ, ಭಾಗಮಂಡಲ ಪಂಚಾಯ್ತಿಯಲ್ಲಿ ಕರ್ತವ್ಯ ಲೋಪವೆಸಗುತ್ತಿರುವ ಸಿಬ್ಬಂದಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ವರ್ಗಾಯಿಸುವಂತೆ ತಿಳಿಸಿದರು. ಜಿಲ್ಲಾಧಿಕಾರಿಗಳು ಹೆಚ್ಚು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಕೆಳ ಹಂತದ ಅಧಿಕಾರಿಗಳು ಕೂಡ ಅವರಷ್ಟೇ ಚುರುಕಾಗಬೇಕೆಂದು ತಿಳಿಸಿದ ಸಚಿವರು, ನೊಂದವರ ಕೂಗಿಗೆ ಸ್ಪಂದಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಎಸ್‍ಪಿ ಡಾ.ಸುಮನ್ ಡಿ. ಪನ್ನೇಕರ್, ಸಿಇಒ ಲಕ್ಷ್ಮೀಪ್ರಿಯ, ಪ್ರತಾಪ್ ಸಿಂಹ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

2 hours ago

ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?

ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…

4 hours ago

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?

ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…

8 hours ago

ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

13 hours ago

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

22 hours ago