#Agriculture | ಮಲೆನಾಡಲ್ಲಿ ಅಗರ್‌ವುಡ್‌ ಕಟಾವು-ಸಂಸ್ಕರಣೆಗೆ ಆರಂಭ | ಅಡಿಕೆಯ ಉಪಬೆಳೆಯಾಗಿ ಆದಾಯ ತರಬಹುದೇ…?

September 4, 2023
9:04 PM
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗರ್‌ವುಡ್‌ ಸಂಸ್ಕರಣೆ ಕೆಲಸ ಆರಂಭವಾಗಿದೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಹಲವು ಕಡೆ ಅಗರ್‌ ಕೃಷಿ ನಡೆಸಲಾಗುತ್ತಿತ್ತು. ಕೆಲವು ಕೃಷಿಕರು ಅಗರ್‌ ಮರಕ್ಕೆ ಔಷಧಿ ನೀಡುವ ಮೂಲಕ ಅಗರ್‌ ಸಂಗ್ರಹಕ್ಕೆ ಮುಂದಾಗಿದ್ದರು. ಇದೀಗ ಸಂಸ್ಕರಣೆಯ ಕೆಲಸವೂ ಆರಂಭವಾಗಿದೆ.

ಅಗರ್‌ವುಡ್‌ ಅನೇಕ ವರ್ಷಗಳಿಂದ ಕೃಷಿಕರ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಅದರ ಆದಾಯ ಹೇಗೆ? ಕೃಷಿ ಸವಾಲುಗಳು ಏನು? ಕಟಾವು ಹೇಗೆ ? ಇತ್ಯಾದಿಗಳ ಬಗ್ಗೆ ಮಾತುಕತೆಗಳಾಗುತ್ತಿದ್ದವು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಅಗರ್‌ವುಡ್‌ ಕಟಾವು ಮಾಡಿ ಸಂಸ್ಕರಣೆಯ ಹಂತ ನಡೆಯುತ್ತಿದೆ. ಕೆಲವು ರೈತರಿಗೆ ಆದಾಯ ಲಭ್ಯವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾದರೂ ಅಡಿಕೆಯ ಉಪಬೆಳೆಯಾಗಿ ಉತ್ತಮವಾದ ಆದಾಯ ಎನ್ನುವುದು  ಕೃಷಿಕರ ಅಭಿಪ್ರಾಯ.

Advertisement
Advertisement

ದಕ್ಷಿಣ ಕನ್ನಡ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಭತ್ತದ ನಂತರ ವಾಣಿಜ್ಯ ಬೆಳೆಯಾಗಿ ಅಡಿಕೆ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ಉಪಬೆಳೆಯಾಗಿ ಅಗರ್‌ವುಡ್‌ ನೆಡಬಹುದು ಎನ್ನುವ ಸಲಹೆ ಇತ್ತು. ಆದರೆ ಹಲವು ಉಪಬೆಳೆಗಳಲ್ಲಿ ಕೈಸುಟ್ಟುಕೊಂಡ ಕೃಷಿಕರು ಸಂದೇಹದಿಂದಲೇ ನೋಡುತ್ತಿದ್ದರು. ಕೆಲವು ವರ್ಷದ ಹಿಂದೆ ಉಪಬೆಳೆಯಾಗಿ ನೆಟ್ಟಿದ್ದ ಅಗರ್‌ ಗಿಡಗಳನ್ನು ಭವಿಷ್ಯ ಇಲ್ಲ ಎಂದು ಕಡಿದು ಹಾಕಿದ ಕೃಷಿಕರೂ ಇದ್ದಾರೆ.

ಇದೀಗ ಅಡಿಕೆ ಹಳದಿ ಎಲೆರೋಗ, ಎಲೆ ಚುಕ್ಕಿ ರೋಗ ಸೇರಿದಂತೆ ಹಲವು ರೋಗಗಳು ಅಡಿಕೆಯನ್ನು ಕಾಡುತ್ತಿದೆ. ಈ ಸಂದರ್ಭದಲ್ಲಿ ಉಪಬೆಳೆಗಳು ಹೆಚ್ಚಿನ ಆದಾಯ ತರುವಂತಾದರೆ ಕೃಷಿಕರು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಿದೆ. ಹೀಗಾಗಿ ಈಗ ಅಗರ್‌ವುಡ್‌ ಕೂಡಾ ಉಪಬೆಳೆಯಾದರೂ ಅದರ ಮಾರುಕಟ್ಟೆ, ಮರ ಸಾಯಿಸುವ ಪ್ರಕ್ರಿಯೆ ಇದೆಲ್ಲವೂ ದೂರದ ಮಾತಾಗಿತ್ತು. ಇದೀಗ ಮಲೆನಾಡು ಭಾಗಗಳಲ್ಲಿಯೇ ಈ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಾಯೋಗಿಕ ಹಂತದಲ್ಲಿರುವುದರಿಂದ ತಾಂತ್ರಿಕ ಅಂಶಗಳೊಂದಿಗೆ ಬೆಳವಣಿಗೆ ಕಾಣುತ್ತಿದೆ. ಸುಳ್ಯ ತಾಲೂಕಿನ ಪಂಜದಲ್ಲಿ ಕೃಷಿಕ ತೀರ್ಥಾನಂದ ಕೊಡೆಂಕಿರಿ ಅವರು ಅಗರ್‌ ಸಂಸ್ಕರಣೆಯ ಕಡೆಗೆ ಗಮನ ನೀಡುತ್ತಿದ್ದಾರೆ. ಅದರ ಜೊತೆಗೆ ಇನ್ನೋಕ್ಯುಲೇಷನ್ ಬಗ್ಗೆಯೂ ಕೃಷಿಕರಿಗೆ ನೆರವಾಗುತ್ತಿದ್ದಾರೆ. ಅಸ್ಸಾಂನಿಂದ ನುರಿತ ಕಾರ್ಮಿಕರು ಆಗಮಿಸಿದ್ದು, ಅಗರ್‌ ಸಂಗ್ರಹದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಗರ್ ವುಡ್ ಅಂತ ಕರೆಸಿಕೊಳ್ಳುವ ಮರ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಿನ ಬೇಡಿಕೆಯಿರುವ ಔಧ್ ಎಂಬ ಸುವಾಸನಾ ದ್ರವ್ಯಕ್ಕೆ ಬಳಕೆಯಾಗುತ್ತದೆ. ಮಳೆಕಾಡುಗಳಲ್ಲಿ ಬೆಳೆಯುವ ಈ ಮರದಲ್ಲಿ ಸುಮಾರು ಹದಿನೇಳು ಉಪಜಾತಿಗಳಿವೆ.ಈ ಮರಗಳಿಗೆ ಒಂದು ರೀತಿಯ ಶಿಲೀಂದ್ರ  ಸೋಂಕು ಉಂಟಾಗಿ ಈ ಮರಗಳ ತಿರುಳಿನ ಭಾಗದಲ್ಲಿ ದಟ್ಟ ಕಂದು – ಕಪ್ಪು ಬಣ್ಣದ ಅಂಟು ಸ್ರವಿಸುತ್ತದೆ ಮತ್ತು ಕೆಲ ವರ್ಷಗಳಲ್ಲಿ ಮರದ ತಿರುಳು ಗಟ್ಟಿಯಾಗಿ ಕಡು ಕಂದುಬಣ್ಣಕ್ಕೆ ತಿರುಗುತ್ತದೆ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು ಇದನ್ನು ಉರಿಸಿದರೆ ಆಹ್ಲಾದಕರವಾದ ಪರಿಮಳ ಬರುತ್ತದೆ. ಇದರಿಂದ ತೈಲವನ್ನೂ ತಯಾರಿಸಲಾಗುತ್ತದೆ. ಹಾಗಾಗಿ ಇದಕ್ಕೆ ಜಾಗತಿಕವಾಗಿ ಬಹಳಷ್ಟು ಬೇಡಿಕೆ ಮತ್ತು ಬಹಳ ಬೆಲೆಯೂ ಇದೆ. ಹೆಚ್ಚಾಗಿ ಯುರೋಪ್ ಮತ್ತು ಅರಬ್ ದೇಶಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಸುಗಂಧ ದ್ರವ್ಯ ತಯಾರಿಕಾ ಕೈಗಾರಿಕೆಗಳೂ ಇದನ್ನು ಬಳಸಿಕೊಂಡು ಅತ್ಯುಕೃಷ್ಟವಾದ ಸುಗಂಧವನ್ನು ತಯಾರಿಸುತ್ತದೆ.  ಹೀಗಾಗಿ ಅಗರ್ ವುಡ್ ಗೆ ಜಾಗತಿಕವಾಗಿ ಒಳ್ಳೆಯ ಬೇಡಿಕೆ ಮತ್ತು ಬೆಲೆ ಎರಡೂ ಇದೆ.

Advertisement

ಸಾಮಾನ್ಯವಾಗಿ ಮಳೆಕಾಡುಗಳಲ್ಲಿ ಈ ಮರಗಳಿಗೆ ಒಂದು ನಿರ್ದಿಷ್ಟ ಶಿಲೀಂಧ್ರ ಸೋಂಕು ಉಂಟಾಗಿ ಆ ಮರದ ತಿರುಳಿನಲ್ಲಿ ಅಗರ್ ವುಡ್ ಉತ್ಪತ್ತಿಯಾಗುತ್ತದೆ. ಆದರೆ ಇಲ್ಲಿ ಬೆಳೆಯುವ ಮರಗಳಿಗೆ ಶಿಲೀಂಧ್ರವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಕೃತಕವಾಗಿ ಸೋಂಕಿಗೊಳಪಡಿಸಲಾಗುತ್ತದೆ. ಹೀಗೆ ಶಿಲೀಂದ್ರ ಸೋಂಕಿಗೊಳಗಾದ ಮರಗಳ ತಿರುಳಿನಲ್ಲಿ ಆ ವಿಶಿಷ್ಟ ಪರಿಮಳದ ಅಂಟು ಉತ್ಪತ್ತಿಯಾಗಿ ಕೆಲ ವರ್ಷಗಳಲ್ಲಿ ಅದು ತಿರುಳಿನ ತುಂಬಾ ವ್ಯಾಪಿಸಿ ಗಟ್ಟಿಯಾಗುತ್ತದೆ.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ
May 18, 2025
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group