ಇಡೀ ದೇಶವೇ ಏಕೆ?, ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಮಾಲಿನ್ಯ, ವಾಯುಮಾಲಿನ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಪರಿಸರ ಮಾಲಿನ್ಯದ ಕಾರಣದಿಂದ ವಾತಾವರಣದ ಉಷ್ಣತೆಯೂ ಹೆಚ್ಚಾಗುತ್ತಿದೆ. ಈ ಕಾರಣದಿಂದ ಮುಂದಿನ 50 ವರ್ಷದಲ್ಲಿ 1.5 ಡಿಗ್ರಿಯಷ್ಟು ಉಷ್ಣತೆಯನ್ನೂ ತಗ್ಗಿಸುವ ಬಗ್ಗೆಯೂ ಯೋಚನೆ ನಡೆಯುತ್ತಿದೆ. ಆದರೆ ಆರಂಭದಲ್ಲಿ ಸರ್ಕಾರಿ ವಾಹನಗಳಿಗೆ ಪರಿಸರ ಮಾಲಿನ್ಯದ ಪಾಠ ಮಾಡಬೇಕಿದೆ…!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದ ಸರ್ಕಾರಿ ಬಸ್ಸು ಇದು. ಪುತ್ತೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಈ ಸರ್ಕಾರಿ ಬಸ್ಸಿನ ಹಿಂದೆ ಹೋದರೆ ಯಾವ ವ್ಯಕ್ತಿಯೂ ಶ್ವಾಸಕೋಸದ ಸಮಸ್ಯೆಗೆ ತುತ್ತಾಗದೇ ಇರಲಾರ, ಏಕೆಂದರೆ ಹೊಗೆ ಬಂಡಿಯ ಮಾದರಿಯಲ್ಲಿ ಉಗುಳುವ ಹೊಗೆಯೇ ಇದಕ್ಕೆ ಕಾರಣ..!. ಇಂದಲ್ಲ, ಕಳೆದ ಕೆಲವು ಸಮಯಗಳ ಹಿಂದೆಯೂ ಇದೇ ಮಾದರಿಯಲ್ಲಿ ಕೆಎಸ್ಆರ್ಟಿಸಿ ಬಸ್ಸು ಹೊಗೆಯುಗುಳುತ್ತಾ ಸಾಗುತ್ತಿದೆ, ಈ ಬಗ್ಗೆ ದೂರುಗಳು ಬಂದರೆ ಡೀಸೆಲ್ ಪಂಪ್ ಹಾಳಾಗಿತ್ತು ದಾರಿ ಮಧ್ಯೆ ಎನ್ನುವ ರೆಡಿಮೇಡ್ ಉತ್ತರ ಇದೆ…!. ಹಾಗೆ ನೋಡಿದರೆ ಪ್ರತಿದಿನವೂ ಅಂತಹ ಬಸ್ಸು ಅದೇ ಮಾದರಿಯಲ್ಲಿ ಓಡಾಡುತ್ತಿರುತ್ತವೆ…!.
ಈಚೆಗೆ ಇಡೀ ದೇಶವೇ ಮಾಯುಮಾಲಿನ್ಯದ ಬಗ್ಗೆ ಚಿಂತನೆ ಮಾಡುತ್ತಿದೆ. ದೆಹಲಿಯಲ್ಲಂತೂ ವಿಪರೀತ ವಾಯುಮಾಲಿನ್ಯದ ಕಾರಣದಿಂದ ಹಲವು ಆರೋಗ್ಯ ಸಮಸ್ಯೆ ಜನರಿಗೆ ಕಾಡುತ್ತಿದೆ. ಈಗ ದೆಹಲಿ ಮಾತ್ರವಲ್ಲ ವಿವಿಧ ರಾಜ್ಯಗಳಲ್ಲಿ ಗಾಳಿಯ ಗುಣಮಟ್ಟ ಕುಸಿತವಾಗಿ ಆತಂಕಕಾರಿಯಾಗುತ್ತಿರುವುದು ಕಂಡುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಗರಿಷ್ಠ ಮಟ್ಟ ತಲುಪಿದ್ದು, ಕರ್ನಾಟಕದಲ್ಲಿ ಸದ್ಯ ಕಡಿಮೆ ಸೂಚ್ಯಂಕ ದಾಖಲಾಗಿದ್ದು, ಏರಿಕೆಯ ಹಾದಿಯನ್ನು ತೋರಿಸುತ್ತಿದೆ.
ಈಚೆಗೆ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ಮಾಲಿನ್ಯ ಪಟ್ಟಿಯಲ್ಲಿ ದೆಹಲಿಯ ಜಹಾಂಗೀರ್ಪುರ್ (439), ಸೆಕ್ಟರ್11 ಫರೀದಾಬಾದ್(425)ದಲ್ಲಿ ಗರಿಷ್ಠ ಪ್ರಮಾಣದ ಮಾಲಿನ್ಯ ದಾಖಲಾಗಿದೆ. ಇಲ್ಲಿ ಪಿಎಂ5, ಪಿಎಂ10 ಮಾಲಿನ್ಯ ಕಣಗಳು ತೀವ್ರವಾಗಿವೆ. ಉಳಿದಂತೆ ದೆಹಲಿಯ ಕೇಂದ್ರ ಭಾಗ, ಉತ್ತರಪ್ರದೇಶದ ನೋಯ್ಡಾ, ಹಾಪುರ್, ಹರಿಯಾಣದ ಹಿಸ್ಸಾರ್, ಗುರುಗ್ರಾಂ ರಾಜಸ್ಥಾನ ಬಿವಾಡಿ, ಮುಜಾಫರ್ ನಗರಗಳಲ್ಲಿ ಗಾಳಿಯ ಗುಣಮಟ್ಟ 350 ಸೂಚ್ಯಂಕಕ್ಕಿಂತ ಮೇಲಿದ್ದು, ಉಸಿರಾಟದ ಸಮಸ್ಯೆ ಎದುರಿಸುವಂತಾಗಿದೆ. ದೆಹಲಿ, ಉತ್ತರಪ್ರದೇಶ, ಹರಿಯಾಣ ಸೇರಿದಂತೆ ಕೆಲವೆಡೆ ಜೀವವಾಯು ವಿಷವಾಗುತ್ತಿದೆ. ಸದ್ಯ ಕರ್ನಾಟಕದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಹಾಗೂ ಅರಬೀ ಸಮುದ್ರದಲ್ಲಿ ಆಗಾಗ ವಾಯುಭಾರ ಕುಸಿತಗಳು ಕಂಡುಬರುತ್ತಿದೆ, ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣ ಪರಿಸರ ಮಾಲಿನ್ಯ ಮತ್ತು ಜಾಗತಿಕ ತಾಪಮಾನದ ಹೆಚ್ಚಳ ಎಂಬ ಮಾಹಿತಿಯನ್ನು ಹವಾಮಾನ ತಜ್ಞರು ಹೇಳುತ್ತಾರೆ.
Advertisement
ಇದೆಲ್ಲಾ ಬೆಳೆವಣಿಗೆಗಳ ನಡುವೆ ಈಚೆಗೆ ಅಂತರಾಷ್ಟ್ರೀಯ ಮಟ್ಟದದಲ್ಲಿ ಹವಾಮಾನ ಸಮ್ಮೇಳನ ಗ್ಲಾಸ್ಗೋದಲ್ಲಿ ನಡೆದಿತ್ತು. ಅಲ್ಲಿಯೂ ಕೂಡಾ ಇಡೀ ಪ್ರಪಂಚದ ಹವಾಮಾನ ಹಾಗೂ ವಾತಾವರಣದ ಉಷ್ಣತೆಯ ಬಗ್ಗೆ ಚರ್ಚೆಯಾಗಿತ್ತು. ಮುಂದಿನ ಕೆಲವು ವರ್ಷಗಳಲ್ಲಿ ವಾತಾವರಣದ ಉಷ್ಣತೆ 1.5 ಡಿಗ್ರಿಯಷ್ಟಯ ತಗ್ಗಿಸಬೇಕು ಎನ್ನುವ ಸಮೂಹ ಚಿಂತನೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಾ, ” ಇಡೀ ಜಗತ್ತಿಗೆ ಸೂರ್ಯನೇ ಮೂಲಧಾರ. ಸೌರ ವಿದ್ಯುತ್ ಮಾನವ ಕುಲ ಯಶಸ್ವಿಯಾಗಿ ಬಳಸಿ ಬದುಕು ಸಾಗಿಸಲು ಜಾಗತಿಕ ಸೋಲಾರ್ ಗ್ರಿಡ್ ಸ್ಥಾಪಿಸಬೇಕು ಎಂದು ಹೇಳಿದ್ದಾರೆ. ‘ಒಬ್ಬನೇ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’ ಎನ್ನುವ ಘೋಷ ವಾಕ್ಯವನ್ನು ಅವರು ಕರೆ ನೀಡಿದ್ದರು.
ಹೀಗಾಗಿ ಈ ಎಲ್ಲಾ ಯೋಜನೆಗಳು ಈ ದೇಶದಲ್ಲಿ ಜಾರಿಯಾಗಲು ಹಾಗೂ ಭವಿಷ್ಯದ ಪರಿಸರ, ವಾತಾವರಣ ಚೆನ್ನಾಗಿರಲು ಈಗಲೇ ಸಿದ್ಧತೆ ಮಾಡಬೇಕು. ಪ್ರತಿಯೊಬ್ಬರೂ ಈ ದಿಸೆಯಲ್ಲಿ ಚಿಂತನೆ ನಡೆಸಲೇಬೇಕಾದ ಅನಿವಾರ್ಯತೆ ಇದೆ. ಅದು ಹಳ್ಳಿಯಿಂದಲೇ ಆರಂಭವಾಗಬೇಕಾದ ಹೆಜ್ಜೆಯಾಗಿದ್ದು, ಸರ್ಕಾರಿ ವಾಹನಗಳೂ ಈ ನಿಟ್ಟಿನಲ್ಲಿ ಆರಂಭದ ಹೆಜ್ಜೆ ಇಡಬೇಕಿದೆ.
AdvertisementView this post on Instagram
A post shared by The Rural Mirror (@theruralmirror)
Advertisement