ಅಡಿಕೆ ಮಾರುಕಟ್ಟೆಯು ನಿರೀಕ್ಷಿತ ರೀತಿಯಲ್ಲಿ ಚೇತರಿಕೆ ಕಂಡಿಲ್ಲ. ಇದೀಗ ಚಾಲಿ ಹೊಸ ಅಡಿಕೆ ಹಾಗೂ ಹಳೆ ಅಡಿಕೆ ಧಾರಣೆಯಲ್ಲೂ ಏರಿಳಿತ ಕಂಡುಬಂದಿದೆ. ಈ ನಡುವೆ ಗಣೇಶ ಚೌತಿ ಬಳಿಕ ಅಡಿಕೆ ಧಾರಣೆಯಲ್ಲಿ ಮಹತ್ವದ ಬದಲಾವಣೆ ಕಾಣಲಿದೆ ಎಂದು ಮಾರುಕಟ್ಟೆ ವಿಶ್ಲೇಷಣೆ ಅಭಿಪ್ರಾಯ ಪಟ್ಟಿದೆ. ಇದೇ ವೇಳೆ ಗುಜರಾತಿನ ಅಹಮದಾಬಾದಿನಲ್ಲಿ ಕೆಜಿ ಅಡಿಕೆಗೆ 600 ರೂಪಾಯಿಗೆ ಬೇಡಿಕೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಚಾಲಿ ಅಡಿಕೆಯಲ್ಲಿ ಹೊಸ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿತ್ತು. ಹಳೆ ಅಡಿಕೆ ಧಾರಣೆ ಸ್ಥಿರತೆಯಲ್ಲಿತ್ತು. ಇದೀಗ ಹೊಸ ಅಡಿಕೆ ಧಾರಣೆ 445 ರೂಪಾಯಿ ಹಾಗೂ ಹಳೆ ಅಡಿಕೆ ಧಾರಣೆ 480 ರೂಪಾಯಿಯಲ್ಲಿದೆ. ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಇಳಿಕೆಯ ಹಾದಿಯಲ್ಲಿದೆ.
ಇದೇ ವೇಳೆ ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಇತರ ಎಲ್ಲಾ ಕಡೆಗಳಲ್ಲೂ ಅಡಿಕೆ ಧಾರಣೆ ಇಳಿಕೆಯ ಹಾದಿಯಲ್ಲಿ ಸಾಗಿದೆ. ಧಾರಣೆ ಇಳಿಕೆಗೆ ವಿವಿಧ ಕಾರಣ ನೀಡಲಾಗುತ್ತಿದೆ. ವಿದೇಶಿ ಅಡಿಕೆ ಆಮದು , ವಿಪರೀತ ದಾಸ್ತಾನು ಸೇರಿದಂತೆ ಹಲವು ಕಾರಣಗಳು ಮಾರುಕಟ್ಟೆ ವಲಯದಲ್ಲಿದೆ. ಕಳ್ಳದಾರಿಯ ಮೂಲಕ ಅಡಿಕೆ ಸಾಗಾಣಿಕೆ ಆಗಿರುವುದು ಚಾಲಿ ಅಡಿಕೆ ಮಾರುಕಟ್ಟೆ ಮೇಲೆ ಸ್ವಲ್ಪ ಪ್ರಮಾಣದ ಪರಿಣಾಮ ಬೀರಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಆಮದು ಅಡಿಕೆ ಲಭ್ಯವಾಗುತ್ತಿದೆ ಎಂದು ಮಾರುಕಟ್ಟೆ ವಲಯ ಹೇಳಿಕೊಂಡಿದೆ.
ಗಣೇಶ ಚೌತಿಯ ಬಳಿಕ ಹೊಸ ಅಡಿಕೆಯು ಮಾರುಕಟ್ಟೆ ಪ್ರವೇಶ ಮಾಡುತ್ತದೆ. ಈ ಸಂದರ್ಭ ಹೊಸ ಅಡಿಕೆ ಧಾರಣೆ ನಿಗದಿಯಾಗುತ್ತದೆ. ಆ ಬಳಿಕ ಅಡಿಕೆ ಧಾರಣೆ ಮತ್ತೆ ಏರಿಕೆಯಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಬಾರಿ ಕೂಡಾ ಅದೇ ಟ್ರೆಂಡ್ ಮುಂದುವರಿಯಲಿದೆ ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ.
ದಕ್ಷಿಣ ಕನ್ನಡದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ದರ ಕೆಜಿಗೆ 438 ರಿಂದ 445 ರೂಪಾಯಿ ಇದೆ. ಹಳೆ ಅಡಿಕೆ ಧಾರಣೆ 465 ರಿಂದ 48೦ ರವರೆಗೆ ಇದೆ. ವಿಶೇಷವಾಗಿ ಮಲೆನಾಡು ಭಾಗದ ಚಾಲಿ ಅಡಿಕೆ ಉತ್ತಮ ಗುಣಮಟ್ಟ ಹೊಂದಿದ್ದು ಈ ಅಡಿಕೆಯನ್ನು ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಬೇಡಿಕೆ ಇದೆ. ಈಗಾಗಲೇ ಕೆಜಿ ಅಡಿಕೆಗೆ 600 ರೂಪಾಯಿಗೆ ಬೇಡಿಕೆ ವ್ಯಕ್ತವಾಗಿದೆ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…