ಅಡಿಕೆ ಹಳದಿ ಎಲೆ ರೋಗ | ಹಬ್ಬಿದ ರೋಗಕ್ಕೆ ಕಂಗಾಲಾದ ಅಡಿಕೆ ಬೆಳೆಗಾರ | ಪರಿಹಾರ ಏನು ? ಮುಂಜಾಗ್ರತೆ ಏನು ?

September 28, 2021
7:00 AM
ಡಿಕೆ ಹಳದಿ ಎಲೆ ರೋಗ ವಿಸ್ತರಣೆಯಾಗುತ್ತಿದೆ. ಕೆಲವೇ ಕಡೆ ಇದ್ದ ಅಡಿಕೆ ಹಳದಿ ಎಲೆ ರೋಗ ಈಗ ಅಲ್ಲಲ್ಲಿ ಕಂಡುಬರುತ್ತಿದೆ. ಶೃಂಗೇರಿ, ಕೊಪ್ಪ, ಕೇರಳದ ಕೆಲವು ಕಡೆ ಹಾಗೂ ದಕ ಜಿಲ್ಲೆಯ ಸಂಪಾಜೆ, ಅರಂತೋಡು ಮಾತ್ರವಲ್ಲ ಈಗ ದ ಕ ಜಿಲ್ಲೆಯ ಹಲವು ತಾಲೂಕುಗಳಲ್ಲಿ  ಕಂಡುಬಂದಿದೆ. ಹೀಗಿರುವಾಗ ಪರಿಹಾರ ಕಾಣದ ಈ ರೋಗಕ್ಕೆ ಬೆಳೆಗಾರರು  ಕಂಗಾಲಾಗಿದ್ದಾರೆ. ಹಾಗಿದ್ದರೆ ಬೆಳೆಗಾರರು ಮಾಡಬೇಕಾದ ಎಚ್ಚರಿಕೆ ಏನು ? ಎಂಬ ಬಗ್ಗೆಯೂ ಮಾಹಿತಿ ಇಲ್ಲ.

Advertisement
Advertisement
ಅಡಿಕೆ ಹಳದಿ ಎಲೆ ರೋಗ ಬಾಧಿಸಿದ ತೋಟ

ಅಡಿಕೆ ತೋಟದಲ್ಲಿ ಹಳದಿ ಎಲೆ ರೋಗಕ್ಕೆ ಇಂದಿಗೂ ಶಾಶ್ವತವಾದ ಪರಿಹಾರ ಸಾಧ್ಯವಾಗಿಲ್ಲ. ದೀರ್ಘಾವಧಿಯ ಅಧ್ಯಯನ ಹಾಗೂ ಸಂಶೋಧನೆ ಬಳಿಕ ಈ ರೋಗಕ್ಕೆ ಕಾರಣ ಫೈಟೋಪ್ಲಾಸ್ಮಾ ಎಂದು ಗುರುತಿಸಲಾಗಿತ್ತು. ಹಾಗಿದ್ದರೂ ಸಂಪೂರ್ಣವಾಗಿ ಅಧಿಕೃತವಾಗಿ ಇಂದಿಗೂ ಹೇಳಲಾಗುತ್ತಿಲ್ಲ. ಮೇಲ್ನೋಟಕ್ಕೆ ಫೈಟೋಪ್ಲಾಸ್ಮಾ ಕಾರಣ ಎಂದು ಹೇಳಲಾಗುತ್ತದೆ. ಆದರೆ ಈ ರೋಗ ಪ್ರಸರಣದ ವಾಹನ ಯಾವುದು  ಎಂಬ ಬಗ್ಗೆಯೂ ಖಚಿತವಾದ ಅಧ್ಯಯನ ನಡೆದರೂ ಅಧಿಕೃತ ವರದಿ ಇಲ್ಲ.ಮಣ್ಣು, ನೀರು, ಗಾಳಿ ಕಾರಣವೇ ಎಂಬುದೂ ಅಧಿಕೃತವಾಗಿಲ್ಲ.ಈ ನಡುವೆಯೇ ಹಳದಿ ಎಲೆ ರೋಗ ವಿಸ್ತರಣೆಯಾಗುತ್ತಿದೆ. ಹೀಗಿರುವಾಗ ಅಡಿಕೆ ಬೆಳೆಗಾರರು ತಕ್ಷಣಕ್ಕೆ ಹಳದಿ ಎಲೆ ರೋಗ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬುದೂ ಮಾಹಿತಿ ಇಲ್ಲ.

ಅಡಿಕೆ ಹಳದಿ ಎಲೆ ರೋಗ ಬಾಧಿಸಿದ ಅಡಿಕೆ ಮರ

ಕೇರಳದಲ್ಲಿ ಕಾಣಿಸಿಕೊಂಡ ಅಡಿಕೆ ಹಳದಿ ಎಲೆ ರೋಗ ಕೇರಳದ ವಯನಾಡು ಪ್ರದೇಶ ದಾಟಿ ಕರ್ನಾಟಕದ ಸುಳ್ಯ, ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಹಲವು ಕಡೆಗಳಲ್ಲಿ  ಹಲವು ವರ್ಷಗಳಿಂದ ಕಂಡುಬಂದಿತ್ತು. ಇದೀಗ ಸುಳ್ಯದ ಸಂಪಾಜೆ, ಅರಂತೋಡು ಕಡೆಗಳಲ್ಲಿ  ವ್ಯಾಪಕವಾಗಿದೆ, ಮರ್ಕಂಜ ಪ್ರದೇಶದಲ್ಲೂ ಕಂಡುಬಂದು ವ್ಯಾಪಿಸುತ್ತಿದೆ. ಗುತ್ತಿಗಾರು, ಕಡಬ, ಕಾಣಿಯೂರು, ಸವಣೂರು ಸೇರಿದಂತೆ ಹಲವು ಕಡೆಗಳಲ್ಲಿ  ಕಂಡುಬಂದಿದೆ. ಶೃಂಗೇರಿ, ಕೊಪ್ಪ ಪ್ರದೇಶದಲ್ಲೂ ಹೆಚ್ಚಾಗಿ ಕಂಡುಬಂದಿದೆ.ಶೃಂಗೇರಿಯ ಮುಂದಿನ ಪ್ರದೇಶದಲ್ಲಿ  ಕಣ್ಣು ಹಾಯಿಸಿದಷ್ಟು ದೂರಕ್ಕೆ ಅಡಿಕೆ ಮರ ಹಳದಿ ಬಣ್ಣಕ್ಕೆ ತಿರುಗಿ,  ಬೋಳಾಗಿ ಒಣಗಿ ನಿಂತ ಅಡಿಕೆ ತೋಟಗಳು ಕಾಣಿಸಸುತ್ತವೆ, ಹಸಿರು ತೋಟಗಳೇ ಇಲ್ಲ ಎಂಬಷ್ಟು ರೋಗಪೀಡಿತ ತೋಟಗಳು ಕಂಡುಬಂದಿದೆ.

ಸುಳ್ಯ ತಾಲೂಕಿನ ಗುತ್ತಿಗಾರಿನ ಚಣಿಲ ಪ್ರದೇಶದಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ  ಈ ಬಗ್ಗೆ ಮಾಹಿತಿ ತಿಳಿದಿದೆ. ಇದೀಗ ನಿಧಾನಕ್ಕೆ ವಿಸ್ತರಣೆಯೂ ಆಗಿದೆ. ಎರಡು ವರ್ಷಗಳಿಂದ ಚಣಿಲ ಪ್ರದೇಶದ ಹಲವು ತೋಟಗಳಲ್ಲಿ ಹಳದಿ ಎಲೆ ರೋಗ ಕಾಣಿಸಿಕೊಂಡಿದೆ. ಇದೀಗ ಅಡಿಕೆ ಗುಣಮಟ್ಟದಲ್ಲೂ ವ್ಯತ್ಯಾಸ ಕಾಣುತ್ತಿದೆ ಎನ್ನುತ್ತಾರೆ ಕೃಷಿಕ ತಿರುಮಲೇಶ್ವರ ಭಟ್‌ ಚಣಿಲ.

ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ,ಮರ್ಕಂಜದಿಂದ ತೊಡಗಿ ವಿಟ್ಲ ಬಳಿಯ ಬದನಾಜೆ, ಕೊಡಿಪ್ಪಾಡಿ, ಪೋಳ್ಯ, ಕೆದಿಲ, ಕೊಡಿಯಾಲ, ಕಾಣಿಯೂರು, ಪಂಜ, ಕುಕ್ಕುಜಡ್ಕ, ಹೀಗೆ ಹಲವು ಕಡೆಗಳಲ್ಲಿ ವಿಸ್ತರಿಸಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಆತಂಕವಾಗಿದೆ.

ಸದ್ಯಕ್ಕೆ ಈ ರೋಗವು ಮಣ್ಣು ಅಥವಾ ನೀರಿನ ಮೂಲಕ ಪಸರಿಸುವ ಸಾಧ್ಯತೆ ಹೆಚ್ಚು ಎಂಬುದು  ಒಂದು ಅಧ್ಯಯನ ವರದಿ. ಹೀಗಾಗಿ ಹಳದಿ ಎಲೆ ರೋಗ ಪೀಡಿತ ಪ್ರದೇಶದಿಂದ ಮಣ್ಣು ಸಹಿತವಾದ ಗಿಡಗಳನ್ನು ತಂದು ನೆಡುವುದು  ತಪ್ಪಿಸಬೇಕು. ಅಡಿಕೆ ಹಳದಿ ಪೀಡಿತ ಪ್ರದೇಶದ ಆಸುಪಾಸಿನ ಕಡೆಯ ಅಡಿಕೆ ಗಿಡಗಳನ್ನೂ ತಂದು ನೆಡುವುದು  ಕಡಿಮೆ ಮಾಡಬೇಕಿದೆ. ನರ್ಸರಿ ಮೊದಲಾದ ಕಡೆಗಳಿಂದ ಗಿಡಗಳನ್ನು ತರುವ ಮೊದಲು ಸರಿಯಾದ ಪೂರ್ವ ಮಾಹಿತಿ ಬೆಳೆಗಾರರು ತಿಳಿಯಬೇಕಿದೆ. ಒಂದು ವೇಳೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ಆಸುಪಾಸಿನ ಮರಗಳಿಂದ ಅಡಿಕೆ ಬೀಜ ತಂದು ಗಿಡ ಮಾಡಿದ್ದರೆ ಅಂತಹ ಗಿಡಗಳನ್ನು ಆದಷ್ಟು ನಾಟಿ ಮಾಡುವುದು  ಕಡಿಮೆ ಮಾಡಬೇಕಿದೆ. ಭೂಮಿಯಲ್ಲಿ ಸೂಕ್ಷ್ಮ ಪೋಷಕಾಂಶಗಳ ನಿರ್ವಹಣೆ ಬೆಳೆಗಾರರು ಸರಿಯಾಗಿ ಮಾಡಬೇಕಾಗಿದ್ದು , ಕೆಲವೊಮ್ಮೆ ಇಂತಹ ಪೋಷಕಾಂಶಗಳ ಕೊರತೆಯಿಂದಲೇ ಅಡಿಕೆ ಮರಗಳು ಹಳದಿಯಾಗುತ್ತವೆ. ಇದನ್ನೇ ಹಳದಿ ಎಲೆ ರೋಗ ಎಂದು ತಪ್ಪಾಗಿ ಮಾಹಿತಿ ತಿಳಿಯಬೇಕಾಗುತ್ತದೆ. ಏಕೆಂದರೆ ಹಳದಿ ಎಲೆ ರೋಗ ಪತ್ತೆ ಮಾಡುವ ಯಾವುದೇ ಪ್ರಯೋಗಾಲಯಗಳೂ ಇಲ್ಲಿ ಇಲ್ಲದೇ ಇರುವುದರಿಂದ ಹಳದಿ ಎಲೆ ರೋಗ ಪತ್ತೆ ಮಾಡುವುದೂ ಸುಲಭವಲ್ಲ. ಹೀಗಾಗಿ ಸೂಕ್ಷ್ಮ ಪೋಷಕಾಂಶಗಳನ್ನೂ ಬೆಳೆಗಾರರು ಕಾಲಕಾಲಕ್ಕೆ ನೀಡುವುದು  ಉತ್ತಮ. ಇಂತಹ ಕೆಲವು ಸರಳವಾದ ಯೋಜನೆಯನ್ನು  ಹಾಕಿಕೊಳ್ಳುವ ಮೂಲಕ ಹಳದಿ ಎಲೆ ರೋಗವನ್ನು ಬಂದರೂ ಎದುರಿಸಬಹುದಾಗಿದೆ.

ಅಡಿಕೆ ಹಳದಿ ಎಲೆ ರೋಗ ಬಾಧಿಸಿದ ಅಡಿಕೆ ಮರ

ಅಡಿಕೆ ಕೃಷಿಯ ಭವಿಷ್ಯದ ಮೇಲೆ ಕರಿನೆರಳು ಬಿದ್ದಿರುವುದು  ಸತ್ತ. ಧಾರಣೆ ಏರಿಕೆಯ ಖುಷಿ ಸದ್ಯಕ್ಕಿದ್ದರೂ, ಅಡಿಕೆ ಹಳದಿ ಎಲೆ ರೋಗಕ್ಕೆ ಸೂಕ್ತವಾದ ಪರಿಹಾರ ಸಿಗದೇ ಇದ್ದರೆ ಭವಿಷ್ಯದಲ್ಲಿ ದ ಕ ಜಿಲ್ಲೆಯಲ್ಲಿ  ಅಡಿಕೆ ಬೆಳೆಯೇ ಮಾರಕವಾಗಿ ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾದ ಅಡಿಕೆಯ ಮೇಲೆ ಹಾನಿ ಇರುವುದು  ನಿಶ್ಚಿತವಾಗಿದೆ.  ಅಡಿಕೆ ವಹಿವಾಟು ಇಡೀ ಕರಾವಳಿ ಮೇಲೆ ಪರಿಣಾಮ ಬೀರುವುದರಿಂದ ಇಲ್ಲಿನ ಆರ್ಥಿಕ ವಹಿವಾಟಿನ ಮೇಲೂ ಪರಿಣಾಮವಾಗಬಹುದು. ಹೀಗಾಗಿ ಈಗಲೇ ಸೂಕ್ತ ಎಚ್ಚರಿಕೆ ಅಗತ್ಯವಾಗಿದೆ.

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror