#PMFBY | ಬಗೆಹರಿಯದ ಬೆಳೆ ವಿಮೆ ಗೊಂದಲ | ಅಡಿಕೆಗೆ ಈ ಬಾರಿ ಇಲ್ಲ ವಿಮೆ…!? | ಕೃಷಿ ಬೆಳೆಗಳಿಗೆ ಮಾತ್ರಾ ಸೀಮಿತ ?

June 23, 2023
9:13 PM

ಹವಾಮಾನ ವೈಪರೀತ್ಯದ ಕಾರಣದಿಂದ ನಾಶವಾಗುವ ಕೃಷಿಗೆ ಪರಿಹಾರವಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆ ಜಾರಿಯಾಗಿತ್ತು. 2016 ರಲ್ಲಿ ಈ ಯೋಜನೆ ಘೋಷಿಲಾಗಿತ್ತು. ಅಂದಿನಿಂದ ದೇಶದ ಎಲ್ಲಾ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಅಡಿಕೆ ಸೇರಿದಂತೆ ಎಲ್ಲಾ ಬೆಳೆಗಳಿಗೂ ಈ ಯೋಜನೆ ವಿಸ್ತರಣೆಯಾಗಿತ್ತು. ಅಡಿಕೆಗೆ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಜಾರಿಯಲ್ಲಿದೆ. ಈ ಬಾರಿ ಜೂನ್‌ ಅಂತ್ಯವಾದರೂ ಈ ಯೋಜನೆ ಜಾರಿಯಾಗಿಲ್ಲ. ಇದೀಗ ಅಡಿಕೆ ಹೊರತುಪಡಿಸಿ ಇತರ 36 ಬೆಳೆಗಳಿಗೆ ಫಸಲ್‌ ಭೀಮಾ ಯೋಜನೆಗೆ ಚಾಲನೆ ದೊರೆತಿದೆ. ಈ ಬಾರಿ ಅಡಿಕೆಯನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ…? ಎಂಬ ವರದಿಗಳು ಕೇಳಿಬಂದಿದೆ.ಇದುವರೆಗೂ ಈ ಬಗ್ಗೆ ಯಾವುದೇ ಸ್ಪಷ್ಟನೆಗಳು ಬಂದಿಲ್ಲ.

Advertisement
Advertisement

2016 ರಲ್ಲಿ ಈ ಯೋಜನೆ ಜಾರಿಯಾದರೂ ಅನೇಕ ಸಂದೇಹಗಳು ಇದ್ದವು. ಆರಂಭದಲ್ಲಿ ಸಾಲಗಾರ ರೈತರಿಗೆ ಬೆಳೆ ವಿಮೆ ಕಡ್ಡಾಯ ಎಂದು ಇದ್ದರೂ ನಂತರ ವಿಮೆ ಹಣ ಪಾವತಿ ರೈತರಿಗೆ ಕಡ್ಡಾಯವೂ ಇರಲಿಲ್ಲ. ಹೀಗಾಗಿ ಬಹುತೇಕ ಕೃಷಿಕರು ಈ ಬಗ್ಗೆ ಯೋಚನೆ ಮಾಡಿರಲಿಲ್ಲ. ಅದಾದ ಬಳಿಕ ಸಹಕಾರಿ ಸಂಘಗಳಿಗೂ ಈ ಯೋಜನೆ ಜಾರಿ ಮಾಡಲು ಸರ್ಕಾರದಿಂದ ಸೂಚನೆ ಬಂದಿತ್ತು. ಅಂದಿನಿಂದ ಗ್ರಾಮೀಣ ಭಾಗದ ರೈತರಿಗೂ ಬೆಳೆ ವಿಮೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕಳೆದ ವರ್ಷದವರೆಗೂ ಹವಾಮಾನ ಆಧರಿತ ವಿಮಾ ಯೋಜನೆ ಹಾಗೂ ಫಸಲು ವಿಮಾ ಯೋಜನೆ ಎರಡೂ ಕೂಡಾ ಜಾರಿಯಲ್ಲಿತ್ತು. ಆದರೆ ಈ ಬಾರಿ ಫಸಲು ವಿಮಾ ಯೋಜನೆ ಮಾತ್ರಾ ಜಾರಿಯಾಗುವ ಸೂಚನೆ ಸರ್ಕಾರದಿಂದ ಬಂದಿದೆ. ಸಹಕಾರಿ ಸಂಘಗಳಿಗೆ ಜೂ.20 ರಂದು ಸುತ್ತೋಲೆ ಬಂದಿದ್ದು ಅದರಲ್ಲಿ ಫಸಲು ವಿಮಾ ಯೋಜನೆ ಜಾರಿಯ ಮಾಹಿತಿ ನೀಡಲಾಗಿದೆ. ಈ ಸುತ್ತೋಲೆ ಪ್ರಕಾರ 36 ಬೆಳೆಗಳಿಗೆ ಫಸಲ್‌ ಭೀಮಾ ಯೋಜನೆಯ ಪ್ರಕಾರ ಪ್ರೀಮಿಯಂ ಕಟ್ಟಲು ಸೂಚನೆ ಇರುತ್ತದೆ. ಈ ಪಟ್ಟಿಯಲ್ಲಿ ಅಡಿಕೆ ಹೊರತುಪಡಿಸಲಾಗಿದೆ.

ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯವು ಈ ಯೋಜನೆಯ ನಿರ್ವಹಣೆ ಮಾಡುತ್ತಿದ್ದು, ಕರ್ನಾಟಕ ಸೇರಿದಂತೆ ಭಾರತದ ಎಲ್ಲ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಆಯಾ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಜಾರಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ನಿರ್ವಹಣೆ ಮಾಡುವ ಈ ಯೋಜನೆಗೆ ವಿಮಾ ಕಂಪನಿಗಳು ನೆರವಾಗುತ್ತವೆ. ಹಾಗೂ

ರೈತರಿಗೆ ಕಡಿಮೆ ಬೆಲೆಗೆ ಬೆಳೆ ವಿಮೆ ಒದಗಿಸುವುದು ಹಾಗೂ ಬೆಳೆ ಹಾನಿಗೆ ಪರಿಹಾರವೂ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೆಳೆಯನ್ನು ಆಧರಿಸಿ ಪ್ರೀಮಿಯಂ ಕಂತು ನಿಗದಿಯಾಗುತ್ತದೆ ಮತ್ತು ಇದನ್ನು ಬೀಜ ಬಿತ್ತನೆಗೂ ಮೊದಲೇ ಮಾಡಬೇಕು. ಬಳಿಕ ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲೀ ಅಥವಾ  ನೈಸರ್ಗಿಕ ಅವಘಡಗಳಿಂದಾಗಲೀ ಬೆಳೆ ಹಾನಿ ಸಂಭವಿಸಿದರೆ ರೈತರು ವಿಮೆ ಮಾಡಿದ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಯಿ೦ದ ಪಡೆಯುತ್ತಾರೆ.

Advertisement

ವಿಮೆ ಮಾಡಿಸಿದ ರೈತರು ಮೊದಲಿಗೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ಬೆಳೆ ಸಮೀಕ್ಷೆ ಆಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು.  ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದಾಗ ರೈತರು ಯಾವ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕು.ನಂತರ  ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾಳಾದ ಕುರಿತು ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ಬಳಿಕ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.

ಹವಾಮಾನ ಆಧರಿತ ವಿಮಾ ಯೋಜನೆಯು ಆಯಾ ವರ್ಷದ ಹವಾಮಾನವನ್ನು ಆಧರಿಸಿ ಇಡೀ ಗ್ರಾಮಕ್ಕೆ ವಿಮಾ ಕಂಪನಿ ಹಣ ಪಾವತಿ ಮಾಡುತ್ತದೆ. ಆ ಊರಿನ ಮಳೆ ಹಾಗೂ ಬಿಸಿಲಿನ ಆಧಾರದಲ್ಲಿ ಪ್ರತೀ ಗ್ರಾಮಗಳಿಗೆ ಪರಿಹಾರ ಹಣ ನಿಗದಿಯಾಗುತ್ತದೆ. ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತವಾದ ವಿಮೆ ಲಭ್ಯವಾಗುವುದರಿಂದ  ಪ್ರತಿವರ್ಷ ಕೋಟ್ಯಂತರ ರೂಪಾಯಿಗಳು ಗ್ರಾಮಕ್ಕೆ ಬರುತ್ತಿದ್ದವು. ಆ ಹಣಗಳು ಗ್ರಾಮದಲ್ಲಿ ವಿಮೆ ಪಾವತಿ ಮಾಡಿದ ಕೃಷಿಕರ ಖಾತೆಗಳಿಗೆ ಜಮಾವಣೆಯಾಗುತ್ತಿದ್ದವು. ಕೃಷಿಕರ ಸಂಕಷ್ಟಕ್ಕೆ ಸಾಂತ್ವನ ನೀಡುತ್ತಿದ್ದವು. ಈ ವಿಮೆಗೆ ಜೂನ್‌ ಅಂತ್ಯದೊಳಗೆ ಪ್ರೀಮಿಯಂ ಪಾವತಿ ಮುಗಿಯಬೇಕು. ಆದರೆ ಇನ್ನೂ ಈ ಬಗೆಗೆ ಯಾವುದೇ ಆದೇಶ,ಸೂಚನೆ ರಾಜ್ಯ ಸರಕಾರದಿಂದ ಬಂದಿಲ್ಲ. ಆದರೆ ಫಸಲು ಭೀಮಾ ಯೋಜನೆ ಅನುಷ್ಟಾನಕ್ಕೆ ಸೂಚನೆ ಬಂದಿದೆ. ಅದರಲ್ಲಿ 36 ಬೆಳೆಗಳ ಪಟ್ಟಿ ಇದೆ . ಅಡಿಕೆ , ಕಾಳುಮೆಣಸು ಸೇರಿದಂತೆ ಕೆಲವು ಬೆಳೆಗಳನ್ನು ಕೈಬಿಡಲಾಗಿದೆ.

ಈಗಿನ ಪ್ರಕಾರ  ಫಸಲು ವಿಮಾ ಯೋಜನೆ ಮಾತ್ರ ಅನುಷ್ಟಾನಿಸಲಾಗುತ್ತದೆ .ಅದೂ ಒಂದು ವರ್ಷಕ್ಕೆ ಸೀಮಿತವಾಗಿ ಎಂದು ಮಾಹಿತಿ ಇದೆ.

ಕೃಷಿ ಎಂದರೆ ಪ್ರಕೃತಿಯೊಡನೆ ನಡೆಸುವ ಜೂಜಾಟ ಅಂತಲೇ ಹೇಳಿಕೆ.ತನ್ನೆಲ್ಲ ಪ್ರಯತ್ನದ ನಂತರವೂ ತನ್ನದಲ್ಲದ ಕಾರಣಕ್ಕಾಗಿ ನಷ್ಟ ಅನುಭವಿಸ ಬಹುದಾದ ಕ್ಷೇತ್ರ ಕೃಷಿ ಕ್ಷೇತ್ರ.ಜೊತೆಗೆ ಇಲ್ಲಿ ದುಡಿಯುತ್ತಿರುವ ಬಹುತೇಕರೂ ಆರ್ಥಿಕ ಏರಿಳಿತಗಳನ್ನು ತಡೆದುಕೊಳ್ಳಲು ಶಕ್ಯವಿಲ್ಲದಂತಹವರು. ಆರಂಭದಲ್ಲಿ ಇದರ ಉಪಯುಕ್ತತೆಯ ಬಗ್ಗೆ ಸಂದೇಹವಿತ್ತು.ವರುಷಗಳು ಉರುಳುತ್ತಾ ಹೋದಂತೆ ಕೃಷಿಕರು ಇದರ ಲಾಭ ಪಡೆದಂತೆ ಬೇಡಿಕೆಯೂ ಹೆಚ್ಚುತ್ತಾ ಹೋಯಿತು. ಕೃಷಿಕರ ಸಂಕಷ್ಟಕ್ಕೆ ಸಾಂತ್ವನ ನೀಡುತ್ತಿದ್ದವು. ಈ ವರ್ಷ ಜೂನ್ ತಿಂಗಳಾರಂಭದಿಂದಲೇ ಕೃಷಿಕರಿಂದ ‘ ಇನ್ನೂ ವಿಮಾ ಹಣ ಸಂಗ್ರಹಿಸುವುದಿಲ್ವಾ?’ ಎಂಬ ಬೇಡಿಕೆ ಇತ್ತು.ಸರಕಾರ ಕೃಷಿಕರ ಕೈ ಬಿಡದು ಎಂಬ ಧೈರ್ಯದಿಂದ ಒಂದಷ್ಟು ಸಂಸ್ಥೆಗಳು ಕೃಷಿಕರಿಂದ ವಿಮಾ ಮೊತ್ತವನ್ನು ಸಂಗ್ರಹಿಸಲೂ ತೊಡಗಿದವು.ಈ ಪ್ರಕ್ರಿಯೆ ಜೂನ್ ತಿಂಗಳ ಕೊನೆ ಒಳಗಡೆ ಮುಗಿಯ ಬೇಕಾಗಿತ್ತು.ಆದರೆ ಇನ್ನೂ ಈ ಬಗೆಗೆ ಯಾವುದೇ ಆದೇಶ,ಸೂಚನೆ ರಾಜ್ಯ ಸರಕಾರದಿಂದ ಬಂದಿಲ್ಲ.ನಿನ್ನೆ ಬಂದ ಆದೇಶದಲ್ಲಿ ಈ ವರ್ಷ ಕೇವಲ ಫಸಲು ವಿಮಾ ಯೋಜನೆ ಮಾತ್ರ ಅನುಷ್ಟಾನಿಸಲಾಗುತ್ತದೆ ,ಅದೂ ಒಂದು ವರ್ಷಕ್ಕೆ ಸೀಮಿತವಾಗಿ ಮಾತ್ರ ಎಂಬ ಮಾಹಿತಿ ಇದೆ.ಹವಾಮಾನ ಆಧರಿತ ವಿಮಾ ಯೋಜನೆಯ ಪ್ರಸ್ತಾಪ ಇಲ್ಲದ್ದು ಮತ್ತು ಪ್ರಸ್ತಾವಿತ ಯೋಜನೆಯಲ್ಲಿ ಅಡಿಕೆ ,ಕಾಳುಮೆಣಸು ಬೆಳೆಗಳು ಇಲ್ಲದ್ದು ಆಘಾತಕಾರಿಯಾಗಿದೆ. ಸಂಬಂಧಿತರು ಈ ಕೂಡಲೇ ಕೃಷಿಕರುಗಳಿಗೆ ಬಹುಪಯೋಗಿಯಾದ ಹವಾಮಾನ ಆಧರಿತ ವಿಮಾ ಯೋಜನೆಯ ಪ್ರಕ್ರಿಯೆಯನ್ನು ಆರಂಭಿಸಬೇಕೆಂಬ ಒತ್ತಾಯ ಇಲ್ಲಿನ ಕೃಷಿಕರೆಲ್ಲರದ್ದು
. – ರಮೇಶ ದೇಲಂಪಾಡಿ, ಕೃಷಿಕ ಹಾಗೂ ಮರ್ಕಂಜ ಸಹಕಾರಿ ಸಂಘದ ಅಧ್ಯಕ್ಷರು

Advertisement

ಕಳೆದ ಎರಡು ವರ್ಷಗಳಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಈ ವಿಮೆ ಉಪಯುಕ್ತವಾಗಿತ್ತು. ಭಾರೀ ಮಳೆಯ ಕಾರಣದಿಂದ ಅಡಿಕೆ ಬೆಳೆ ನಾಶವಾಗಿತ್ತು. ಈ ಸಂದರ್ಭದಲ್ಲಿ ಈ ವಿಮೆ ಪರಿಹಾರದ ರೂಪದಲ್ಲಿ ಅಡಿಕೆ ಬೆಳೆಗಾರರಿಗೆ ನೆರವಾಗಿತ್ತು. ಒಂದು ಹೆಕ್ಟೇರ್ ಅಡಿಕೆ ಬೆಳೆ ವಿಮೆಗೆ ರೈತರು ರೂ.6400,ರಾಜ್ಯ ಸರ್ಕಾರ 75% ಮತ್ತು ಕೇಂದ್ರ ಸರ್ಕಾರ 25% ಒಟ್ಟು ಮೊತ್ತ ರೂ 65,202 ಪಾವತಿಸುತ್ತದೆ.ರೈತರ ಆಪತ್ತಿಗೆ ಸರಕಾರ ತಂದ ಬೆಳೆ ವಿಮಾ ಯೋಜನೆ ನೆರವಾಗಿತ್ತು. ಇದೀಗ ಸರ್ಕಾರ ಅಡಿಕೆಯನ್ನು ಕೈಬಿಟ್ಟಿರುವುದು  ಅಡಿಕೆ ಬೆಳೆಗಾರರ ಗಮನಕ್ಕೆ ಇನ್ನಷ್ಟೇ ಬರಬೇಕಿದೆ.

 

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |
June 4, 2025
11:06 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು
June 4, 2025
7:27 AM
by: The Rural Mirror ಸುದ್ದಿಜಾಲ
ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……
June 4, 2025
7:21 AM
by: ವಿವೇಕಾನಂದ ಎಚ್‌ ಕೆ
ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?
June 4, 2025
6:45 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group