Advertisement
Opinion

ವಾರಣಾಸಿ ಎಂಬ ದ್ವಂದ್ವಗಳ ನಗರ

Share

ಕೆಲವು ದಿನಗಳ ಹಿಂದೆ ವಾರಣಾಸಿಗೆ ಭೇಟಿ ನೀಡಿದ್ದೆ.ಹೋದದ್ದು ಪ್ರವಾಸಿಗನಾಗಿ,ತೀರ್ಥಯಾತ್ರಿಯಾಗಿ ಅಲ್ಲ.ಇವೆರಡಕ್ಕೂ ವ್ಯತ್ಯಾಸ ಇದೆ.
ತೀರ್ಥಯಾತ್ರಿಗೆ ತಾನು ಆಶಿಸಿದ್ದ ಧಾರ್ಮಿಕ ವಿಧಿವಿಧಾನಗಳು ಸೂಕ್ತವಾಗಿ ಜರುಗಿದರಾಯ್ತು.ಆತ ತೃಪ್ತ.ಇನ್ನುಳಿದ ಯಾವುದೇ ತಾಪತ್ರಯಗಳು, ವಿಷಯಗಳು ಗೌಣವಾಗಿ ಬಿಡುತ್ತವೆ.ಪ್ರವಾಸಿಗನಿಗೆ ಹಾಗಲ್ಲ.ಅಲ್ಲಿನ ಸುಖಗಳ ಜೊತೆಗೆ ಅಲ್ಲಿನ ದೌರ್ಬಲ್ಯಗಳೂ ಕಾಣುತ್ತವೆ. ‌‌‌ಈ ವರೆಗೆ ದೇಶದ ವಿವಿದೆಡೆ ಸಂಚರಿಸಿದ್ದಾಗ ಕಂಡುಬಂದ ಅಂಶ ಎಂದರೆ ತಥಾಕಥಿತ ಧಾರ್ಮಿಕ ಕ್ಷೇತ್ರಗಳಲ್ಲಿ ಅಲ್ಲಿನ ನಿಯಂತ್ರಕರು ತೀರ್ಥಯಾತ್ರಿಗಳನ್ನಷ್ಟೇ ಅಪೇಕ್ಷಿಸುವುದು, ಪ್ರವಾಸಿಗರನ್ನಲ್ಲ.ಯಾಕೆಂದರೆ ತೀರ್ಥಯಾತ್ರಿಗಳಷ್ಟೇ ಬಂದರೆ ಭೌತಿಕ‌ ಸೌಕರ್ಯ ಹೆಚ್ಚು ಕೊಡಬೇಕಾದ್ದಿಲ್ಲ ಮತ್ತು‌ ಧಾರ್ಮಿಕತೆಯ ವ್ಯಾಪಾರೀಕರಣಕ್ಕೆ ಹೆಚ್ಚು ಅನುಕೂಲವಾಗ್ತದೆ.

‌‌ವಾರಣಾಸಿ ನನ್ನೆಲ್ಲಾ ಕಲ್ಪನೆಗೆ ಮೀರಿದ್ದಾಗಿತ್ತು.ಒಂದೆಡೆ ನಿರಂತರವಾಗಿ ಉರಿಯುತ್ತಿರುವ ಚಿತಾಗ್ನಿ.ಅದರಲ್ಲಿ ನಿರಂತರವಾಗಿ ಭಸ್ಮವಾಗುತ್ತಿರುವ ಮಾನವ ಶರೀರಗಳು.ಸಂತಾಪ,ಶೋಕದ ಪರಿಸರ.ನಶ್ವರತೆಯ ಪಾಠ ಅಲ್ಲಿ.ಅದರ ಎದುರಲ್ಲೇ ಡಿಜೆ ಶಬ್ದದೊಂದಿಗೆ ಮೋಜು ಮಸ್ತಿಯ ಕುಣಿತದಿಂದೊಡಗೂಡಿದ ಲಕ್ಸುರಿ ದೋಣಿ ಚಲಿಸುತ್ತಾ ಇರ್ತದೆ.ಪಕ್ಕದಲ್ಲೇ ಅಬ್ಬರದ ಸಂಗೀತದಿಂದೊಡಗೂಡಿದ ಗಂಗಾರತಿ ಎಂಬ ಹಬ್ಬ,ಜಾತ್ರೆ.ಮೂರೂ ಅಕ್ಕಪಕ್ಕದಲ್ಲೇ, ಜೊತೆಜೊತೆಯಲ್ಲಿಯೇ ಮೂರೂ ಪರಸ್ಪರ ವಿರೋಧದ್ದು ವಾರಣಾಸಿ ಎಂದರೇನೇ ದ್ವಂದ್ವ.

ಕಥೆಯೊಂದು ನೆನಪಾಗುತ್ತಿದೆ.ಒಮ್ಮೆ ಓರ್ವ ಸನ್ಯಾಸಿ ಮತ್ತು‌ ಓರ್ವ ಭೋಗಿ ಸ್ಮಶಾನವೊಂದರ ಪರಿಸರದಲ್ಲಿ ದೀರ್ಘಕಾಲ ವಾಸಿಸ ಬೇಕಾಯ್ತಂತೆ.ಸ್ಮಶಾನಕ್ಕೆ ಶವಗಳು ಬರುತ್ತಿದ್ದವು.ಜೊತೆಗಿರುವವರ ಗೋಳಾಟ ನಿತ್ಯವೂ ಇದ್ದದ್ದು.ಯಾವುದೂ ಶಾಶ್ವತವಲ್ಲ ಎಂಬ ದರ್ಶನ.ನಿಧಾನವಾಗಿ ಸನ್ಯಾಸಿ ‘ ಯಾವುದೂ ಶಾಶ್ವತವಲ್ಲ ಎಂದ ಮತ್ತೆ ಯಾಕೆ ಈ ಪ್ರಪಂಚದ ಸುಖಗಳಿಂದ ದೂರ ಇರಬೇಕು’ ಅಂತ ಭೋಗಿಯಾದನಂತೆ.ಭೋಗಿ ‘ ಯಾವುದೂ ಶಾಶ್ವತವಲ್ಲ’ ಎಂದ ಮತ್ತೆ ಈ ಕ್ಷಣಿಕವಾದ ಭೋಗ ಯಾತಕ್ಕೆ ಅಂತ ಸನ್ಯಾಸಿಯಾದನಂತೆ.ಒಂದೇ ಕ್ರಿಯೆ ಹೇಗೆ ಬೇರೆ ಬೇರೆ ಜನರಲ್ಲಿ ಭಿನ್ನ ಭಿನ್ನ ಪರಿಣಾಮಗಳನ್ಬು ಉಂಟು ಮಾಡ್ತದೆ ಎಂಬುದನ್ನು ತೋರಿಸುವ ಕಥೆ.

ಇತಿಹಾಸದಲ್ಲೂ ಇಂತಹುದೇ ಘಟನೆಯೊಂದು ದಾಖಲಾಗಿದೆಯಂತೆ.ಅಪರಾಧಿಗಳನ್ನು ಹತ್ಯೆಗೈಯಲು ಗಿಲೆಟಿನ್ ಕಂಡು ಹಿಡಿಯಲಾಗಿದ್ದ ಕಾಲ.ಅದರ ಮೂಲಕ ಸಾರ್ವಜನಿಕವಾಗಿ ಜನರನ್ನು ಹತ್ಯೆ ಮಾಡಲಾಗುತ್ತಿತ್ತಂತೆ.ಅದೇ ಸಮಯದಲ್ಲಿ ಅಲ್ಲಿ ಕ್ರಾಂತಿಯಾಗಿತ್ತು .ವಿರೋಧಿಗಳನ್ನೆಲ್ಲ ಅಪರಾಧಿಗಳು ಅಂತ ಪರಿಗಣಿಸಲಾಗುತ್ತಿತ್ತು.ಹಾಗಾಗಿ ದಿನವೂ ಅನೇಕರ ಹತ್ಯೆ ಸಾರ್ವಜನಿಕವಾಗಿ ನಡೆಯುತ್ತಿತ್ತು.ಮೊದ ಮೊದಲು ಜನ ಭಯ,ಹಿಂಜರಿಕೆಯಿಂದ ನೋಡ್ತಾ ಇದ್ರಂತೆ.ಬರಬರುತ್ತಾ ಅಲ್ಲೇ ತಿಂಡಿಗಳನ್ಬು ತಿನ್ನುತ್ತಾ ,ಪಾನೀಯ ಹೀರುತ್ತಾ ಜನರ ಕತ್ತು ಕತ್ತರಿಸುತ್ತಿರುವುದನ್ಬು ನೋಡಲಾರಂಭಿಸಿದರಂತೆ.ಅದನ್ನು ನೋಡಲೂ ಜನ ಸೇರಲಾರಂಭಿಸಿದರಂತೆ.

ವಾರಣಾಸಿಯ ಸೆಳೆತ ಅಸಾಧ್ಯವಾದದ್ದು ಅಂತ ಅಲ್ಲೇ ನೆಲೆನಿಂತ ವಿದೇಶಿಗರೂ ಇದ್ದಾರಂತೆ.ತಮ್ಮ ಉಳಿದ ಜೀವಿತಾವಧಿ ವಾರಣಾಸಿಯಲ್ಲೇ ಕಳೆಯುವುದು ಅಂತ ನಿರ್ಧರಿಸಿದ ವೈರಾಗಿಗಳೂ ಇದ್ದಾರಂತೆ. ಸ್ವತಹ ಶಿವನಿಂದ ಸ್ಥಾಪಿಸಲ್ಪಟ್ಟ ನಗರ ಎಂಬ ಐತಿಹ್ಯ ಇಲ್ಲಿಗೆ.ಐತಿಹಾಸಿಕವಾಗಿಯೂ ಶತಮಾನಗಳ…ಅಲ್ಲಲ್ಲ..ಸಹಸ್ರಮಾನದ ಇತಿಹಾಸ ,ನಗರೀಕತೆ ದಾಖಲಾಗಿರುವ ಪಟ್ಟಣ ಇದು. ಭಾರತದೆಲ್ಲೆಡೆ ಹಿಂದೂ ಶ್ರದ್ಧಾಳುಗಳಿಗೆ ಜೀವನದಲ್ಲಿ‌ ಒಮ್ಮೆಯಾದರೂ ಭೇಟಿ ನೀಡಬೇಕೆಂಬ ಬಯಕೆ ಇರುವ ಕ್ಷೇತ್ರ ವಾರಣಾಸಿ.ಆಧ್ಯಾತ್ಮಿಕ‌ ನಗರ ಎಂಬ ನಂಬಿಕೆ,ಭಾವ.ಆದರೇ….

ಧಾರ್ಮಿಕತೆಗೆ ಸಂಬಂಧಿಸಿದ ಪ್ರತಿಯೊಂದನ್ನೂ ಲೌಕಿಕ ವ್ಯವಹಾರದ,ವ್ಯಾಪಾರದ ಭಾಗವನ್ನಾಗಿಸಿದ ಪಟ್ಟಣವೂ ಇದುವೇ.ಇಲ್ಲಿನ ಜನರೇ.ಎಲ್ಲಿ ವ್ಯಾಪಾರ…? ಅಂಗಡಿಗಳಲ್ಲಿ ಮಾತ್ರ ಅಲ್ಲ.ಪವಿತ್ರವೆನಿಸಿದ ದೇವಾಲಯಗಳ ಒಳಗಡೆಯೂ ವ್ಯಾಪಾರವೇ.ಒಬ್ಬೊಬ್ವರದು ಒಂದೊಂದು ವ್ಯಾಪಾರೀ ಪಾತ್ರ.
ವ್ಯಾಪಾರವೇ ಪ್ರಧಾನವಾದಲ್ಲಿ ಜನ ಜೀವನ ವೇಗದ್ದು,ಧಾವಂತದ್ದು.ಉದ್ವೇಗದ್ದು.ಅವೆಲ್ಲವೂ ವಾರಣಾಸಿಯ ಜನಜೀವನದ ಅವಿಭಾಜ್ಯ ಅಂಗಗಳು.ಅದರಿಂದಾಗಿ‌ ಶಬ್ದ ಮಾಲಿನ್ಯ ವಿಪರೀತ.ಪ್ರತಿಯೊಬ್ಬ ವಾಹನಿಗನೂ ಹಾರ್ನ್ ಅದುಮಿಕೊಂಡೇ ಇರುವುದು. Accelerator ಕೊಟ್ಟುಕೊಂಡೇ ಇರುವುದು.

ವ್ಯಾಪಾರದ ಅಭಿಲಾಷೆ ಒಂದು ಹಂತ ಮೀರಿದರೆ ನೈತಿಕತೆ ಕಣ್ಮರೆಯಾಗುತ್ತದೆ. ಲಾಭ ಮಾತ್ರ ಕಾಣಿಸುವುದು. Floating customers ಇದ್ದಲ್ಲಂತೂ ಎದುರು ಇದ್ದವರನ್ನೆಲ್ಲ ಬಕ್ರಾಗಳೆಂದೇ ಪರಿಗಣನೆ. ಇವನ್ನೆಲ್ಲ ಮೀರಿ ನಿಂತವರು ಅಪರೂಪದಲ್ಲಷ್ಟೇ ಕಾಣಿಸಿಯಾರಷ್ಟೇ. ಇದು ವಾರಣಾಸಿ. ದ್ವಂದ್ವಗಳ ನಗರ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

Published by
ರಮೇಶ್‌ ದೇಲಂಪಾಡಿ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

10 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

19 hours ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

20 hours ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

24 hours ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago