Advertisement
Opinion

ಗೋ ವಧೆ ಮಾಡುವವರು ಸಿಕ್ಕರೆ “ಸನ್ಮಾನ” ಮಾಡಿ… : ಗೋಮುಖ ವ್ಯಾಘ್ರರರಿಂದ ಗೋವುಗಳ ರಕ್ಷಣೆ ಹೇಗೆ..?

Share

ಒಂದು ಕಾಲದಲ್ಲಿ ಮಲೆನಾಡಿನ(Malenadu) ಮನೆ ಮನೆಯಲ್ಲಿ ಇಪ್ಪತ್ತೈದು- ಐವತ್ತು ಮಲೆನಾಡು ಗಿಡ್ಡ ತಳಿ ಹಸುಗಳು ಇದ್ದದ್ದು ಅತ್ಯಂತ ಸಹಜವಾದ ವಿಚಾರವಾಗಿತ್ತು. ತದನಂತರ ನಿಧಾನವಾಗಿ ದೇಸಿ ತಳಿ ಹಸುಗಳು(Desi cow) ಕಡಿಮೆ ಹಾಲಿನ(Milk) ಇಳುವರಿ, ಸಾಂಪ್ರದಾಯಿಕ ಮೇವಿನ ಕೊರತೆಯ ಕಾರಣಕ್ಕೆ ತೆರೆ ಮರೆಗೆ ಸರಿಯುತ್ತಾ ನೋಡ ನೋಡುತ್ತಾ ತೊಂಬತ್ತು ಪ್ರತಿಶತ ಕಡಿಮೆ ಆಯಿತು. ದೇಸಿ ತಳಿ ಹಸುಗಳ ಬದಲಿಗೆ ಬಂದ ಹೆಚ್ ಎಫ್ ಜೆರ್ಸಿ ಹಸುಗಳೂ ಒಂದಷ್ಟು ದಿನ ಹಳ್ಳಿ ಹಳ್ಳಿಯಲ್ಲಿ(Village) ವೈಭವದ ದಿನಗಳನ್ನು ಕಂಡು ಈಗ ಅವೂ ಇಲ್ಲವಾಗಿದ್ದಾವೆ. ಕೊಟ್ಟಿಗೆ ಖಾಲಿ ಖಾಲಿ..

ದುರಂತ ಎಂದರೆ ಹೆಚ್ ಎಫ್ ಹಸುಗಳ ದಾಳಿಗಳ ನಡುವೆಯೂ ಉಳಿದಿದ್ದ ಹತ್ತು ಪರ್ಸೆಂಟ್ ಮಲೆನಾಡು ಗಿಡ್ಡ ದೇಸಿ ತಳಿ ಹಸುಗಳಿಗೂ ಈಗ ಮೇವಿಲ್ಲ.. ಮೇವು ತುಟ್ಟಿ… ಪರಿಪಾಲಕರಿಲ್ಲ ಎಂಬ ಮಾಮೂಲಿನ ನೆಪಕ್ಕೆ ಅವು ಸೇರಲು ಸುರಕ್ಷಿತ ಆಸರೆ ಇಲ್ಲದೆ ನಮ್ಮ ಹಿಂದೂ “ಗೋವಧರ” ಕೈಗೆ “ದನದ ದಲ್ಲಾಳಿಗಳು” ಎಂಬ ಹೆಸರಿನಲ್ಲಿ ಸೇರಿ ನಂತರ ಇವರಿಂದ “ಆಹಾರದ ಹಕ್ಕಿನವರ ” ಹೊಟ್ಟೆ ಸೇರುತ್ತಿದೆ.

ಈ ದಲ್ಲಾಳಿಗಳದ್ದು ಹಂಸಕ್ಷೀರ ನ್ಯಾಯ…!!, ಪಾಪ.. ರೈತ ಗೋಪಾಲಕರು ನೇರವಾಗಿ ಕಸಾಯಿಗಳಿಗೆ ಗೋವುಗಳನ್ನ ಮಾರಲಾಗದೇ ಇಂತಹ ಗೋಮುಖ ವ್ಯಾಘ್ರ ರಿಗೆ ತಮ್ಮ ಗೋವುಗಳನ್ನ ಮಾರುತ್ತಾರೆ. ಈ ಗೋವಧರು ಹಸುಗಳನ್ನು ತಮ್ಮ ಕೊಟ್ಟಿಗೆ ಗೆ ತಂದು ಕಟ್ಟಿ ಸಾಕುವವರು ಬಂದರೆ ಮಾರುತ್ತಾರೆ. ಸಾಕುವವರು ಬರದಿದ್ದರೆ ಎಂದಿನಂತೆ ಕಟುಕರಿಗೆ ಈ ಹಸುಗಳನ್ನು ಮಾರುತ್ತಾರೆ.

ನೀವು ಈ ಗೋವಧೆ ಮಾಡುವವರನ್ನು ಗಮನಿಸಿ ನೋಡಿ. ಇವರು ಕೊಂಡಷ್ಟು ಜಾನುವಾರುಗಳು ಇವರ ಕೊಟ್ಟಿಗೆಯಲ್ಲಿ “ಕಾಣದಂತೆ ಮಾಯವಾಗಿ ಬಿಡುತ್ತವೆ…!! ಈ ಬಗ್ಗೆ ಇವರನ್ನು ಕೇಳಿದರೆ ಮನೆಯ ಬಳಿಯ ಮಣ್ಣಿನ ದಿಬ್ಬ ತೋರಿಸಿ ಹಸು ಸತ್ತು ಹೋಯಿತು ಎನ್ನುತ್ತಾರೆ..!! ನಮ್ಮ ಭಾಗದ ಒಬ್ಬ ಹಿಂದೂ ಗೋವಧನೊಬ್ಬ ಸರ್ಕಾರದ ಪಶುವೈದ್ಯ ಇಲಾಖೆ ಗೆ ತಾನು “ಗೋಶಾಲೆ” ಸ್ಥಾಪನೆ ಮಾಡುತ್ತೇನೆ ಎಂದು ಅರ್ಜಿ ಕೊಟ್ಟಿದ್ದ…!! ಪುಣ್ಯಕ್ಕೆ ಸರ್ಕಾರದ ಸಂಬಂಧಿಸಿದ ಇಲಾಖೆಯವರು ಈ ಮನುಷ್ಯನ ಅರ್ಜಿ‌ ಪರಾಂಬರಿಸಿ ಆತನಿಗೆ ಗೋಶಾಲೆ ಸ್ಥಾಪಿಸಲು ಪರವಾನಿಗೆ ನೀಡಲಿಲ್ಲ.

ಈಗ ಇಂತವನೇ ಇನ್ನೊಬ್ಬ ಅಕ್ರಮ ವಾಗಿ ಗೋ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದು ಆಸ್ತಿಕ ಗೋಪ್ರೇಮಿ ಜನರಿಂದ ಹೊಡೆತ ತಿಂದಿದ್ದಾನೆ. ಗೋ ಸಾಗಣೆ ಮಾಡುವವರು ಸಿಕ್ಕರೆ ಕಂಡ ಕಂಡವರು ಬಡಿಗೆ ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಯಾವುದೋ ಪಕ್ಷ ಮುಖಂಡರ ಪ್ರಚೋದನೆ ಅಲ್ಲ…!! ಪ್ರತಿ ಹಿಂದೂವೂ ಗೋವುಗಳನ್ನ ಪೂಜನೀಯವಾಗಿ ನೋಡುತ್ತಾರೆ. ಯಾವುದೇ ಅಂತಃಕರಣ ಇರುವ “ಮನುಷ್ಯನೂ ಕೂಡ” ಈ ಮುಗ್ದ ಹಸುಗಳನ್ನು ಒಂದು ಬಗೆಯಲ್ಲಿ ಬಟನ್ ಛತ್ರಿ ಮಡಚಿದಂತೆ, ಯಾವುದೋ ಜಡ ವಸ್ತು ತುಂಬಿಕೊಂಡು ಹೋದಂತೆ ವಾಹನದಲ್ಲಿ ತುಂಬಿಕೊಂಡು ಹೋಗುವುದನ್ನ ಕಂಡಾಗ ಕೋಪವುಕ್ಕಿ‌ “ಸಿಕ್ಕ ವನಿಗೆ ” ತಪರಾಕಿ ಹಾಕುತ್ತಾರೆ.

ಜನ Actually ಕಾನೂನು ಕೈಗೆತ್ತಿಕೊಳ್ಳಬಾರದಿತ್ತು. ಆದರೆ ಇಲ್ಲಿ ಜನ ಸ್ವಲ್ಪ ಹೆಚ್ಚೇ ಈ ಕಟುಕರನ್ನು ಹಿಡಿದು ಬೆಂಡೆತ್ತಿದ್ದಾರೆ. ಈ “ಕಸಾಯಿ ಅಂಬ್ಯುಲೆನ್ಸ್ ” ಚಾಲಕ ಪಕ್ಕದ ತಾಲ್ಲೂಕಿನವನಂತೆ..! ಅವನ ಕಡೆಯವರು ಅವರ ತಾಲ್ಲೂಕಿನ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ನಮ್ಮ ತಾಲ್ಲೂಕಿನ ಶಾಸಕರ ಬಗ್ಗೆ ಹತ್ತು ವರ್ಷಗಳ ಹಿಂದಿನ ಯಾವುದೋ “ಹಗೆ ಗೆ’ ಮತ್ತು “ಭಾಂದವರ ಮತ ಋಣ” ದ ಕಾರಣದಿಂದ ಅವರು ನೇರವಾಗಿ ಸಂಬಂಧಿಸಿದ ಸಚಿವರಿಗೆ ಒತ್ತಡ ಹಾಕಿದಾಗ ಅವರು ಸಂಬಂಧಿಸಿದ ಇಲಾಖೆಯ ಉನ್ನತಾಧಿಕಾರಿಗೆ “ಹಲ್ಲೆ ಕೋರರ ” ಮೇಲೆ ಕೇಸ್ ಹಾಕಿ ಬಂಧಿಸಲು ಹೇಳಿದರು.

ಇಲಾಖೆಯವರೋ ಫೀನಲ್ ಕೋಡ್ ನ ಗರಿಷ್ಠ ಪ್ರಮಾಣದ ಎಲ್ಲಾ ಕಾನೂನನ್ನು ಸಂಗ್ರಹಿಸಿ ಹತ್ತು ಹನ್ನೆರಡು ಕೇಸು ಹುಡುಕಿ ಆ ಘಟನೆ ಯಲ್ಲಿ ಇದ್ದವರು, ದೂರದಲ್ಲಿ ನಿಂತು ನೋಡಿದವರು, ಆ ಸಂಧರ್ಭದಲ್ಲಿ ಅಲ್ಲಿ ಇಲ್ಲದವರು ಎಲ್ಲರ ಹುಡುಕಿ ಹುಡುಕಿ ಕೇಸು ಹಾಕಿದ್ದಾರೆಂಬ ಮಾಹಿತಿ ಬಂದಿದೆ. ಇದರಲ್ಲಿ ಒಂದೇ ಹೆಸರಿನ ಆರು ಜನರಲ್ಲಿ ಯಾರೋ ಒಬ್ಬನನ್ನು ಇಲಾಖೆಯವರು ಆಯ್ಕೆ ಮಾಡಿಕೊಂಡು ಬಂಧಿಸುವ ಒತ್ತಡವೂ ಇಲಾಖೆಗೆ ಇದೆ..!!

ಆ “ದುರಾದೃಷ್ಟಶಾಲಿ” ಯಾರೆಂದು ಕಾದು ನೋಡಬೇಕಿದೆ…!?? ಇಲಾಖೆಯವರು ಯಾರನ್ನು ಆಯ್ಕೆ ಮಾಡುತ್ತಾರೋ ಎಂಬುದು ಗೊತ್ತಿಲ್ಲ…!! ಇಲಾಖೆಗೆ ಈ ಗಲಭೆಯ ವಿಚಾರದಲ್ಲಿ ಇನ್ನಷ್ಟು ಜನರನ್ನು ಸೇರಿಸಬಹುದಾದ ಅವಕಾಶವಿದೆ….!! ಯಾರ ಹೆಸರೂ ಈ ಪಟ್ಟಿಯಲ್ಲಿ ಸೇರಬಹುದು..”

ಈ ಘಟನೆ ನೆಡೆದ ತಕ್ಷಣ ಹಾಲಿ ಶಾಸಕರು ಸಂಬಂಧಿಸಿದ ಉನ್ನತಾಧಿಕಾರಿಗೆ ಕರೆ ಮಾಡಿದರೆ ಅವರು ಶಾಸಕರ ಕರೆಯನ್ನೇ ಸ್ವೀಕರಿಸಲಿಲ್ಲವಂತೆ. ವರ್ಷದ ಹಿಂದೆ ಇದೇ ಶಾಸಕರು ಅದೇ ಇಲಾಖೆಯ ಸಚಿವರಾಗಿದ್ದಾಗ ” ಅದೇ ಅಧಿಕಾರಿಗಳು” ಇವರ ಎದುರು ತಲೆ ತಗ್ಗಿಸಿ ನಿಲ್ಲುತ್ತಿದ್ದರು…. “ಕಾಲಯ ತಸ್ಮೈ ನಮ:”…ಈಗ ಫೋನೇ ನೆಗ್ಗೋಲ್ಲ…!! ಈ ಘಟನೆ ಯಲ್ಲಿ ಕಥೆ ಉಪಕಥೆ ಅನೇಕವಿದೆ. ಇರಲಿ ಆಲ್ ರೈಟ್ ಮುಂದುಕ್ಕೋಗೋಣ..

ರಾಜ್ಯ ಸರ್ಕಾರ ಗೋ ಹತ್ಯಾ ನಿಷೇಧ ಹಿಂದಕ್ಕೆ ಪಡೆಯಲಿ.. ಕೆಲವು ಸಾವಿರ ಸಂಖ್ಯೆಯಲ್ಲಿ ಇರುವ ಗೋವುಗಳು ತಿಂದು ಖಾಲಿಯಾಗಲಿ . ಒಂದು ಸರ್ತಿ ಖಾಲಿಯಾದ ಮೇಲೆ ಮತ್ತೆ ಉಳಿಸುವ ಕಾಯುವ ಗೋಜೇ ಇರೋಲ್ಲ…!! ಒಂದು ಕಾಲದಲ್ಲಿ ನಮ್ಮ ಮಲೆನಾಡಿನ ಮೂಲೆ ಮೂಲೆಯಲ್ಲೂ ಶ್ರೀಗಂಧ ಇತ್ತು.ಆಗಿನ ಕಾಲದಲ್ಲಿ ನಮ್ಮ ಮಲೆನಾಡಿನಿಂದ ಆಗುಂಬೆ ಘಾಟಿ ಯಲ್ಲಿ ಸಂಚರಿಸುವ ಮಿನಿ ಬಸ್ ನೊಳಗೆ ಆಗುಂಬೆ ಘಾಟಿ ಚೆಕ್ ಪೋಸ್ಟ್ ನ ಸಿಬ್ಬಂದಿ ಗಳು ಬಂದು ಪ್ರಯಾಣಿಕರು ಮತ್ತು ಅವರ ಬ್ಯಾಗ್ ನ್ನ ತಪಾಸಣೆ ಮಾಡುತ್ತಿದ್ದರು. ಈಗ ಯಾವ ತಪಾಸಣೆ ಯೂ ಇಲ್ಲ… ಇಲಾಖೆಗೆ ಕಾಯಲು ಕಾಡಿನಲ್ಲಿ ಗಂಧವೂ ಇಲ್ಲ ಕಾಡಿನಲ್ಲಿ ಅಮೂಲ್ಯ ಮರವೂ ಇಲ್ಲ…!!

ಇಲಾಖಾ ಅಧಿಕಾರಿಗಳು ಎಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಅಕೇಶಿಯ ನೆಟ್ಟು ವನ ಮಹೋತ್ಸವ ಮಾಡಿ ತದನಂತರ ಅದೇ ವನದಲ್ಲಿ ಕಟಾವಿಗೆ ಪರವಾನಗಿ ಕೊಟ್ಟು ” ಧನ ಮಹೋತ್ಸವ ” ಮಾಡಿ ಕೃತಾರ್ಥ ರಾಗುತ್ತಿದ್ದಾರೆ…!! ಇದೂ ಅದೇ ರೀತಿಯ ವಿಚಾರ… ಈ ಕಟುಕರು ಆಹಾರದ ಹಕ್ಕಿನವರ ಮೇಲಾಟದ ನಡುವೆ ಹಿಂದೂ ಆಸ್ತಿಕ ಪೂಜನೀಯ ಭಾವನೆ ಹೋಗಲಿ … ಈ ನಿಸರ್ಗದ ಅಮೂಲ್ಯ ಜೀವಿ..

ಆನೆ, ಕಾಡು ಕೋಣ, ಜಿಂಕೆ, ಕಡವೆಯಂತೆ ಇದೂ ಒಂದು ಬಗೆಯಲ್ಲಿ ವನ್ಯ ಮೃಗ.. ಈ ಮಲೆನಾಡಿನ ಮನುಷ್ಯನಿಗಿಂತಲೂ ಹಳೆ ನಿವಾಸಿಗಳು… ಅವುಗಳನ್ನು ಅತ್ಯಂತ ಅಮಾನವೀಯವಾಗಿ ಮೂಟೆಯಂತೆ ತಂಬಿ ಅದನ್ನು ವಾರಗಟ್ಟಲೆ ನೀರು ಆಹಾರ ಕೊಡದೇ ಸತಾಯಿಸಿ ಕೊಲ್ಲಬೇಡಿ ಎಂದು ನಾಗರೀಕವಾಗಿ ಬೇಡಿದರೂ ಕರಗದ ವ್ಯವಸ್ಥೆಯ ಮುಂದೆ ಉಳಿಸಿ ಎನ್ನುವುದಕ್ಕಿಂತ ಒಂದು ಸರ್ತಿ ಕೊಂದು ತಿನ್ನುವವರಿಗೂ … ಸಿಕ್ಕ ಸಿಕ್ಕವರಿಗೆ ಮಾರಿ ಹಗುರವಾಗುವ ಗೋಪಾಲಕರಿಗೂ… ವಾಹನದಲ್ಲಿ ಮೂಟೆಯಂತೆ ತುಂಬಿ ಕೊಂಡೊಯ್ಯುವ “ಗೋ ಮುಕ್ತಿದಾತರಿಗೂ” ಒಮ್ಮೆ ಫ್ರಿ ಫ್ರಿ ಫ್ರೀ ಬಿಟ್ಟುಬಿಡಿ…

ಸಾಗಾಣಿಕೆ ಮಾಡುವರಿಗೆ ದಯಮಾಡಿ ಯಾರೂ ಹೊಡೆಯದಿರಿ…. ಸಾಧ್ಯವಾದರೆ ಅವರಿಗೆ ಹಾರ ಹಾಕಿ ಶಾಲು ಹೊದೆಸಿ ಸನ್ಮಾನ ಮಾಡಿ ಗೌರವಯುತವಾಗಿ ಕಳಿಸಿ… ಈಗ ಹನ್ನೆರಡು ಹನ್ನೆರಡು ಕೇಸು ಹಾಕಿಸಿಕೊಂಡು ವರ್ಷಗಟ್ಟಲೆ ಕೋರ್ಟು ಮನೆ ಅಲೆಯುವುದಕ್ಕಿಂತ ಇದೇ ಒಳ್ಳೆಯದು ಅಲ್ವ…? ಪ್ರಸಕ್ತ ಕಾಲದಲ್ಲಿ ಅಮಾನವೀಯವಾಗಿ ಅಮೂಲ್ಯ ಪ್ರಾಣಿಗಳ ಸಾಗಾಣಿಕೆ ಮಾಡಿ ವಧೆ ಮಾಡುವ ವರ ಕೈ ಮೇಲಾಗುತ್ತಿದೆ. ಈ ದುಷ್ಟ ವ್ಯವಸ್ಥೆಯ ವಿರುದ್ಧದ ಈಜು ಕಷ್ಟ..!!!

ಈ ನಿಸರ್ಗದ “ಅತ್ಯಪೂರ್ವ ಮಳೆಗಾಲ ಬೇಸಿಗೆ ಕಾಲ ಮತ್ತು ಚಳಿಗಾಲವನ್ನೇ” ನಾವು ಕಳೆದುಕೊಂಡು ರಾಷ್ಟ್ರ ಕವಿ ಕುವೆಂಪು ರವರ “ಸಸ್ಯಕಾಶಿ ” ಮಲೆನಾಡನ್ನ “ಮರು ಭೂಮಿ” ಮಾಡುವತ್ತಾ ಸಾಗುತ್ತಿರುವಾಗ ಯಕಶ್ಚಿತ್ ಒಂದೋ ಎರಡೋ ಕ್ವಿಂಟಾಲ್ ಮಾಂಸದ ಬಗ್ಗೆ ಯಾಕೆ ಯೋಚಿಸಬೇಕು ಅಲ್ವಾ…?

Service title
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

18 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago