ಕನ್ನಡ ರಾಜ್ಯೋತ್ಸವ | ಜನ ಮೆಚ್ಚಿದ ಜನಜನಿತ ನುಡಿ-ಕನ್ನಡ

November 1, 2022
8:00 AM

ಕನ್ನಡ ಬರಿಯ ಭಾಷೆಯಲ್ಲ. ಅದು ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿಯಂತೆ, ಮಕರಂದವ ಹೀರಿ ಇನ್ನೇನು ತೆರಳಲು ಸಿದ್ಧವಾದ ದುಂಬಿಯ ಬಾಯಿಯಲ್ಲಿನ ಸವಿ ಜೇನಿನಂತೆ, ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸುವಂತೆ ಕಾಣುವ, ಕೇಳುವ, ಅನುಭವಿಸುವ ಭಾವ. ಭಾವನೆಗಳ ಮೂಲಕ ಬಂಧಗಳು ಬೆಸೆಯುತ್ತವೆ.

ಅಂತೆಯೇ ಭಾಷೆಯ ಮೂಲಕ ಸಾಹಿತ್ಯ ಕೃಷಿ ಉದಯಿಸಿ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಕನ್ನಡವೆಂಬುದು ನಿಂತ ನೀರಲ್ಲ.ಅದು ಹರಿವ ನಿಷ್ಕಲ್ಮಶ ಜಲ. ಎಲ್ಲಿಯವರೆಗೆ ಕನ್ನಡವನ್ನು ಅಪ್ಪಿಕೊಳ್ಳುವ,ಒಪ್ಪಿಕೊಳ್ಳುವವರಿರುತ್ತಾರೋ ಅಲ್ಲಿಯವರೆಗೂ ಕನ್ನಡ ಶಾಶ್ವತವಾಗಿರುತ್ತದೆ.

ಕನ್ನಡ ಭಾಷೆ ಕೇವಲ ಇಂತಿಷ್ಟೇ ಭೌಗೋಳಿಕ ಪ್ರದೇಶಕ್ಕೆ ಅಥವಾ ಇಂತಿಷ್ಟೇ ಜನ ಸಮುದಾಯಕ್ಕೆಂದು ಸೀಮಿತವಾಗಿಲ್ಲ.ಜನಮನಗಳಲ್ಲಿ ಅಚ್ಚಳಿಯದೆ ಉಳಿದ ಭಾಷೆಯಿದು.ಯಾವುದೇ ರಾಜ್ಯವಾಗಲೀ,ಯಾವುದೇ ದೇಶವಾಗಲೀ ಮುಗ್ಧ ಮನಸ್ಸಿನ ಕುಡಿ ಕಂದಮ್ಮಗಳಿಂದ ಹಿಡಿದು ಜ್ಞಾನ ವೃದ್ಧರೂ, ವಯೋವೃದ್ಧರಾದಿಯಾಗಿ ಕನ್ನಡ ನುಡಿಯುವ ಪ್ರತಿಯೋರ್ವರೂ ಕನ್ನಡಿಗರೇ. ಭಾಷೆ ಎಂದಿಗೂ ಯಾರ ಸ್ವತ್ತಲ್ಲ. ಭಾಷೆ ಇರುವುದು ಸಂವಹನಕ್ಕಾಗಿ. ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ. ಹೀಗಾಗಿ ಕೇವಲ ಕನ್ನಡ ಮಾತನಾಡುವವರನ್ನಷ್ಟೇ ಅಲ್ಲ, ಕನ್ನಡವನ್ನು ಗೌರವಿಸುವ, ಕನ್ನಡವನ್ನು ಪೂಜಿಸುವ ಪ್ರತಿಯೊಬ್ಬನನ್ನೂ ಕನ್ನಡಾಂಬೆ ತನ್ನ ಮಗುವೆಂದೇ ಪರಿಗಣಿಸುತ್ತಾಳೆ. ಕನ್ನಡಮ್ಮನ ದೇಗುಲವಿರುವುದು ಪ್ರತಿ ಮನಗಳಲ್ಲಿ, ಸಾರಸ್ವತ ನುಡಿಗಳಲ್ಲಿ. ಕನ್ನಡಾಂಬೆ ಮಾತೃ ಸ್ವರೂಪಳು.ನಮ್ಮನ್ನುದ್ಧರಿಸುವವಳು ಆಕೆ.

ಕನ್ನಡ ಕಲಿಕೆ ಎಂದಿಗೂ ಯಾರಿಗೂ ಒತ್ತಾಯಪೂರ್ವಕವಾಗಿರಬಾರದು. ಐಚ್ಚಿಕವಾಗಿ ಅಥವಾ ಸ್ವ -ಭಾಷಾ ಪ್ರೇಮದಿಂದ ಅದನ್ನು ಕಲಿಯಬೇಕು ಹೊರತು ಹೇರಿಕೆಯಿಂದಲ್ಲ. ಯಾವುದೇ ವಸ್ತುವಾಗಲಿ ವಿಚಾರವಾಗಲಿ ಪೂರ್ಣ ಪ್ರಮಾಣದಲ್ಲಿ ಅದನ್ನು ಗೌರವಿಸಿ ಅದರಲ್ಲಿ ಒಂದಾಗಿ ಕಲಿತರೆ ಅದು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ .ಕನ್ನಡ ಕಲಿಕೆಯೂ ಹಾಗೆಯೇ .ಸ್ವ- ಅಭಿರುಚಿಯಿಂದ ಕಲಿತರೆ ಮಾತ್ರವೇ ಅದರ ಆಳವು ತಿಳಿಯುವುದು .ಕನ್ನಡವೆಂಬುದು ಸಾಗರವಿದ್ದಂತೆ. ಆಳವಾಗಿಯೂ ವಿಶಾಲವಾಗಿಯೂ ತನ್ನ ರೆಂಬೆ ಕೊಂಬೆಗಳನ್ನ ಹರಡಿಕೊಂಡಿರುವ ಅಪಾರವಾದ ಜ್ಞಾನದ ನಿಧಿಯದು.

ಬಗೆದಷ್ಟು ಮೊಗೆಯದ ಕಲಿತಷ್ಟು ಮುಗಿಯದ ಸಿರಿಸಂಪತ್ತನ್ನು ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಕನ್ನಡಿಗನಿಗಿದೆ.ಭಾಷಾ ಪ್ರೇಮ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ. ಕನ್ನಡದ ಜಯಭೇರಿಯು ಪ್ರಚಂಡವಾಗಿ ಮೊಳಗಲಿ.ಕಸ್ತೂರಿ ಕನ್ನಡವು ಜನಮಾನಸದಲ್ಲಿ ರಾರಾಜಿಸಲಿ. ಕನ್ನಡಾಂಬೆಯ ಕೀರ್ತಿ ಉತ್ತುಂಗಕ್ಕೇರಲಿ.

ಬರಹ:
ಅನ್ನಪೂರ್ಣ ಎನ್ ಕುತ್ತಾಜೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ವೃದ್ಧಾಪ್ಯದಲ್ಲಿ ಬೇಕಾಗಿರುವುದು ಹಣವಲ್ಲ, ಗೌರವ ಮತ್ತು ಆತ್ಮೀಯತೆ
May 15, 2026
8:33 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಪದವಿಪೂರ್ವ ಶಿಕ್ಷಣ ಮತ್ತು ನೀಟ್ ಪರೀಕ್ಷೆಯ ಒತ್ತಡ : ಪರ್ಯಾಯ ದೃಷ್ಟಿಕೋನ
May 1, 2026
10:20 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಗುಜ್ಜೆ ಮಂಚೂರಿ – ಕರಾವಳಿಯ ಸಾಂಪ್ರದಾಯಿಕ ರುಚಿಗೆ ಚೈನೀಸ್ ಟ್ವಿಸ್ಟ್
April 20, 2026
9:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror