Advertisement
Opinion

ಜ್ಞಾನದ ಮರುಪೂರಣ ಅಗತ್ಯ…… ಮರು ಭರ್ತಿ ಮಾಡದಿದ್ರೆ ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ

Share

ಬುದ್ಧಿವಂತಿಕೆ(Wisdom), ಅರಿವು(Awareness), ತಿಳಿವಳಿಕೆ(knowing), ಜ್ಞಾನ(Knowledge) ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ(Mental) ಸಂಪನ್ಮೂಲಗಳು(Resources) ಎಂಬ ಬಗ್ಗೆ ಸದಾ ಎಚ್ಚರವಿರಲಿ….. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ ಜ್ಞಾನ ಭಂಡಾರ ತುಂಬಿದೆ, ಇನ್ನೇನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಆಗ ನಮ್ಮ ಅಜ್ಞಾನ‌(Ignorance) ಸಹ ನಮ್ಮ ಅರಿವಿಗೇ ಬರುವುದಿಲ್ಲ. ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ……

ನಾವು ಸಂಪಾದಿಸಿರುವ ಜ್ಞಾನವೆಂಬ ಇಂಧನವನ್ನು ಉಪಯೋಗಿಸುವ ಜೊತೆಗೆ ‌ಕಾಲ ಕಾಲಕ್ಕೆ ಮತ್ತೆ ಮತ್ತೆ ಮರು ಭರ್ತಿ ಮಾಡಿಕೊಳ್ಳುತ್ತಿರಬೇಕು. ಅರಿವಿನ ಬ್ಯಾಟರಿಯನ್ನು ಮತ್ತೆ ಮತ್ತೆ ಚಾರ್ಜ್ ಮಾಡುತ್ತಿರಬೇಕು…..
ಅದು ಓದಿನ ಮುಖಾಂತರ ಇರಬಹುದು, ಚರ್ಚೆಗಳ ಮೂಲಕ ಇರಬಹುದು, ಬದುಕಿನ ಅನುಭವಗಳ ಮೂಲಕ ಇರಬಹುದು, ಪ್ರವಾಸದ ಮುಖಾಂತರ ಇರಬಹುದು, ಕಾಯಕದ ಮುಖಾಂತರ ಇರಬಹುದು, ಮಾಧ್ಯಮಗಳ ಮೂಲಕ ಇರಬಹುದು, ಬರವಣಿಗೆಯ ಮುಖಾಂತರ ಇರಬಹುದು, ಅಭ್ಯಾಸದ ಮೂಲಕ ಇರಬಹುದು, ಯೋಗ ಧ್ಯಾನ ಏಕಾಂತ ಗುರು ಹಿರಿಯರ ಮೂಲಕ ಇರಬಹುದು ಒಟ್ಟಿನಲ್ಲಿ ನಮಗೆ ಸಿಗುವ ಮತ್ತು ಆಸಕ್ತಿ ಇರುವ ಮಾರ್ಗಗಳ ಮೂಲಕ ಅದನ್ನು ತುಂಬಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಬೇಕು. ಇಲ್ಲದಿದ್ದರೆ ನಿಧಾನವಾಗಿ ಖಾಲಿಯಾಗುತ್ತಿರುತ್ತದೆ. ದುರಂತವೆಂದರೆ ಬಹಳಷ್ಟು ಬಾರಿ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ.‌…..

ಆ ಜ್ಞಾನವೆಂಬ ಇಂಧನ ಖಾಲಿಯಾಗುತ್ತಿದ್ದಂತೆ ಆ ಜಾಗದಲ್ಲಿ ದುರಹಂಕಾರ, ದುರಾಸೆ, ಆಲಸ್ಯ, ಬೇಜವಾಬ್ದಾರಿ, ಸಣ್ಣತನ, ಸ್ವಾರ್ಥ, ಮೂರ್ಖತನವೆಂಬ ಇಂಧನಗಳು ಆಕ್ರಮಿಸಿಕೊಳ್ಳತೊಡಗುತ್ತವೆ.
ಈ ಗುಣಗಳು ಹೆಚ್ಚಾಗುತ್ತಿದ್ದಂತೆ ನೋವು ನಿರಾಸೆ ಕೋಪ ಅಸಹನೆ ಅನಾರೋಗ್ಯ ಸಿಡುಕು ಅತೃಪ್ತಿಗಳು ಬೆಳೆಯುತ್ತಾ ಹೋಗುತ್ತದೆ. ಅಲ್ಲಿಗೆ ನಮ್ಮ ನೆಮ್ಮದಿಯ ಮಟ್ಟ ಕುಸಿಯುತ್ತಾ ಹೋಗುತ್ತದೆ. ದುಃಖದ ಭಾವ ಹೆಚ್ಚಾಗುತ್ತಾ ಹೋಗುತ್ತದೆ…….

ಸರ್ಕಾರದಲ್ಲಿ ಕೆಲಸ ಮಾಡುವ ಬಹಳಷ್ಟು ಐಎಎಸ್‌, ಐಪಿಎಸ್, ಕೆಎಎಸ್ ಮುಂತಾದವರು ಸೇರಿ ಎಲ್ಲಾ ಹಂತದ ಅಧಿಕಾರಿಗಳು, ಸರ್ಕಾರಿ ಡಾಕ್ಟರ್, ಇಂಜಿನಿಯರ್, ಲಾಯರ್ ಗಳು, ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹವಾಮಾನ ಮುಂತಾದ ಇಲಾಖೆಗಳಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ಸೇರುವಾಗ ತುಂಬಾ ಕಷ್ಟಪಟ್ಟು ಓದಿ ಎಲ್ಲಾ ಮೂಲಗಳಿಂದ ವಿಷಯ ಗ್ರಹಿಸಿ ಹೆಚ್ಚು ಅಂಕ ಪಡೆದು, ಸಂದರ್ಶನಗಳಲ್ಲಿ ಜಾಣ್ಮೆಯಿಂದ ಉತ್ತರಿಸಿ ಉದ್ಯೋಗ ಪಡೆದಿರುತ್ತಾರೆ. ತುಂಬಾ ಎಚ್ಚರಿಕೆಯಿಂದ ಮುಂದಿನ ನಡೆ ಇಡುತ್ತಾರೆ…..

ಒಮ್ಮೆ ಅಧಿಕೃತವಾಗಿ ಕೆಲಸ ಖಾಯಂ ಆದ ನಂತರ ಅವರ ಆದ್ಯತೆಗಳು ಬದಲಾಗುತ್ತಾ ಹೋಗುತ್ತವೆ. ಮನೆ, ಸಂಸಾರ, ಹಣ, ಅಧಿಕಾರದ ದರ್ಪ, ಗೆಳೆಯರು, ಸಂಜೆಯ ಪಾರ್ಟಿಗಳು ಎಲ್ಲವೂ ತನ್ನಿಂದ ತಾನೇ ಸಹವಾಸ ದೋಷದಿಂದ ಒಲಿದು ಬರುತ್ತದೆ. ಜ್ಞಾನ ಸಂಪಾದನೆಗೆ ಪ್ರಯತ್ನಿಸುವುದೇ ಇಲ್ಲ. ಟಿವಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳೇ ಅವರ ಜ್ಞಾನದ ಮೂಲಗಳು ಮತ್ತು ಸರ್ಕಾರಿ ಆದೇಶಗಳೇ ಅವರ ತಿಳಿವಳಿಕೆಯ ಸಾಧನಗಳು. ಅಲ್ಲಿಂದ ಮುಂದೆ ಸಾಗುವವರು ತೀರಾ ಅಪರೂಪ……

ಬಹಳಷ್ಟು ಜನರಿಗೆ ತಮ್ಮ ಬಾಲ್ಯದಿಂದಲೂ ಬೆಳೆದು ಬಂದ ಅನೇಕ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಆದರೆ ತಿಂಗಳ ಸಂಬಳ ಅವರ ಜೀವನವನ್ನು ಭದ್ರಪಡಿಸುವುದರಿಂದ ಕ್ರಮೇಣ ಎಲ್ಲದರ ಬಗ್ಗೆ ನಿರಾಸಕ್ತಿ ಮೂಡುತ್ತದೆ. ಸ್ವಂತ ಮನೆ, ಸ್ವಂತ ವಾಹನ, ಮಕ್ಕಳು, ಅವರ ಶಿಕ್ಷಣ, ಮದುವೆ ಎಂಬಲ್ಲಿಗೆ ನಿವೃತ್ತಿಯ ಅಂಚಿಗೆ ಬಂದಿರುತ್ತಾರೆ……
ಹಾಗೆಯೇ ಕಲೆ, ಅಧ್ಯಾತ್ಮ, ವ್ಯಾಪಾರ ವಹಿವಾಟು ಮುಂತಾದ ಕ್ಷೇತ್ರಗಳಲ್ಲಿ ನಿರತರಾದರು ಸಹ ಕಾಲ ಕಾಲಕ್ಕೆ Update ಆಗುತ್ತಲೇ ಇರಬೇಕು. ಇಲ್ಲದಿದ್ದರೆ ಸ್ಪರ್ಧೆಯಲ್ಲಿ ಹಿಂದುಳಿಯುವುದು ಮಾತ್ರವಲ್ಲದೆ, ಮಾನಸಿಕ ವ್ಯಕ್ತಿತ್ವವೂ ಅಸಹನೀಯವಾಗುತ್ತದೆ. ಕೀಳರಿಮೆ ಬೆಳೆಯುತ್ತದೆ……

ಈ ಜ್ಞಾನದ ಮರು ಪೂರಣ ಕ್ರಿಯೆ ಆಗಿಂದಾಗ್ಗೆ ಮಾಡುತ್ತಲೇ ಇರಬೇಕು. ಖಾಲಿ ಅಥವಾ ಕಡಿಮೆಯಾಗಲು ಬಿಡಬಾರದು. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಆರಂಭ ಅಂತ್ಯಗಳಿಲ್ಲ. ಕನಿಷ್ಠ ನಿಮ್ಮ ಯೋಚನಾ ಶಕ್ತಿಯನ್ನು ವಿಶಾಲಗೊಳಿಸಿಕೊಳ್ಳುವ ಮೂಲಕವಾದರೂ ಪ್ರಯತ್ನಿಸಬೇಕು……

ಯೋಚಿಸಿ ಯೋಚಿಸಿ ಯೋಚಿಸಿ 360 ಡಿಗ್ರಿ ಕೋನದಲ್ಲಿ ಯೋಚಿಸಿ. ಇಡೀ ಭೂಮಂಡಲದ ಆಗುಹೋಗುಗಳನ್ನು ಗಮನಿಸಿ, ಭೂತ ವರ್ತಮಾನ ಭವಿಷ್ಯದ ಬಗ್ಗೆ ಯೋಚಿಸಿ, ನಿಮ್ಮ ಸುತ್ತ ಮುತ್ತಲಿನ ಎಲ್ಲವುಗಳ ಬಗ್ಗೆಯೂ ಯೋಚಿಸಿ. ನಿಮಗಿಂತ ಕೆಳಗಿರುವವರು, ನಿಮ್ಮ ಜೊತೆ ಇರುವವರು, ನಿಮಗಿಂತ ಮೇಲಿರುವವರು ಎಲ್ಲರ ಬಗ್ಗೆಯೂ ಯೋಚಿಸಿ. ಯೋಚನೆಗೆ ಯಾವುದೇ ಮಿತಿ ಹಾಕಿಕೊಳ್ಳಬೇಡಿ. ಸತ್ಯದ ಹುಡುಕಾಟಕ್ಕೆ ಇದು ಅತ್ಯವಶ್ಯಕ…..

ಕಲಿಕೆಯೆಂಬುದು ನಿರಂತರ ಪ್ರಕ್ರಿಯೆ. ಕಲಿಕೆಯ ಮಾರ್ಗಗಳು ಸಹ ಅಗಣಿತ. ಹೇಗೋ, ಎಲ್ಲಿಂದಲೋ ನಮಗೆ ಗೋಚರಿಸುತ್ತಲೇ ಇರುತ್ತದೆ. ಅದನ್ನು ಗ್ರಹಿಸುವುದಷ್ಟೇ ನಮ್ಮ ಕೆಲಸ. ಈ ಪ್ರಕ್ರಿಯೆ ನಮಗೆ ಹಣವನ್ನು, ಅಧಿಕಾರವನ್ನು, ಜನಪ್ರಿಯತೆಯನ್ನು, ಸಂಬಂಧಗಳನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ, ವಿನಯ ಸ್ಥಿತಪ್ರಜ್ಞತೆ ಕಲಿಸಿ, ಈ ಸೃಷ್ಟಿಯಲ್ಲಿ ನಮ್ಮ ಸ್ಥಾನ ಮತ್ತು ಕರ್ತವ್ಯ ನಮಗೆ ಅರ್ಥ ಮಾಡಿಸಿ ನಮ್ಮ ನೆಮ್ಮದಿಯ ಮಟ್ಟವನ್ನು ಹೆಚ್ಚಿಸುತ್ತದೆ…..

ಆದ್ದರಿಂದ ದಯವಿಟ್ಟು ಕಲಿಕೆಯ ಮುಖಾಂತರ ನಮ್ಮ ಜ್ಞಾನದ ಸಂಪನ್ಮೂಲಗಳನ್ನು ತುಂಬಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಜೀವಿತದುದ್ದಕೂ ಜಾರಿಯಲ್ಲಿರಲಿ. ಅದೇ ನಾವು ಬಯಸುವ ಬದುಕನ್ನು ರೂಪಿಸುತ್ತದೆ.
ಎಂದೂ ನಮ್ಮನ್ನು ನಿರಾಸೆಯ ಅಹಂಕಾರದ ಕೂಪಕ್ಕೆ ತಳ್ಳುವುದಿಲ್ಲ ಅಥವಾ ಅದಕ್ಕೆ ಬಿದ್ದರೂ ಮತ್ತೆ ಪುಟಿದೇಳುವಂತೆ ಮಾಡುತ್ತದೆ……..

ಬರಹ :
ವಿವೇಕಾನಂದ. ಎಚ್.ಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

₹2.34 ಕೋಟಿ ಮೌಲ್ಯದ ಅಡಿಕೆ ಜಪ್ತಿ – ಶಿವಮೊಗ್ಗದ 8 ಮಂದಿಯ ವಿರುದ್ಧ ಕೇಸ್..!

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ₹2.34 ಕೋಟಿ ಮೌಲ್ಯದ 88,544 ಕೆ.ಜಿ. ಅಡಿಕೆಯನ್ನು ಆಹಾರ ಸುರಕ್ಷತಾ…

3 hours ago

ಹಲಸು ಅಭಿವೃದ್ಧಿಗೆ ರಾಷ್ಟ್ರೀಯ ಮಂಡಳಿ ಸ್ಥಾಪಿಸಲು ಮಾಜಿ ಪ್ರಧಾನಿ ದೇವೇ ಗೌಡ ಒತ್ತಾಯ

ಬೆಂಗಳೂರು ಹಣ್ಣು ಮೇಳಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು…

4 hours ago

ಕಾಪುವಿನಲ್ಲಿ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆ ಯಶಸ್ವಿ – ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಆಯೋಜನೆ

ಕಾಪುವಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆಯಲ್ಲಿ…

10 hours ago

ಭಾರತದ 365 ಆಹಾರ ಉತ್ಪನ್ನಗಳಲ್ಲಿ ಕೀಟನಾಶಕ, ಭಾರೀ ಲೋಹಗಳ ಅವಶೇಷ ಪತ್ತೆ..!

ಯುರೋಪಿಯನ್ ಒಕ್ಕೂಟವು 365 ಭಾರತೀಯ ಆಹಾರ ಮತ್ತು ಕೃಷಿ ಉತ್ಪನ್ನಗಳಲ್ಲಿ ಕೀಟನಾಶಕ ಹಾಗೂ…

11 hours ago

ನೇಪಾಳದಿಂದ ಭಾರತೀಯ ಮಾವಿನ ಹಣ್ಣಿಗೆ ನಿರ್ಬಂಧ – ಕೀಟನಾಶಕ ಅಂಶಗಳು ಪತ್ತೆ ಹಿನ್ನೆಲೆ ಕ್ರಮ

ಕೀಟನಾಶಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ಭಾರತೀಯ ಮಾವಿನ ಹಣ್ಣಿನ ಆಮದಿಗೆ…

11 hours ago