ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಹಾಸನ ಜಿಲ್ಲೆಯ ಶಾಂತಿಗ್ರಾಮ ಸಮೀಪ ಟೈಯರ್ ಸ್ಫೋಟಗೊಂಡು ಬೆಂಕಿಗಾಹುತಿಯಾದ ಘಟನೆ ರಾಜ್ಯದ ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಮಹಿಳೆಯರು, ಮಕ್ಕಳು ಸೇರಿ 36 ಮಂದಿ ಪ್ರಯಾಣಿಸುತ್ತಿದ್ದ ಬಸ್ ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿದರೂ, ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರನ್ನು ಕೆಳಗಿಳಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಆದರೆ ಪ್ರಯಾಣಿಕರ ಲಗೇಜ್, ಮೊಬೈಲ್, ಹಣ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಅತಿವೇಗ ಹಾಗೂ ತಾಪಮಾನದಿಂದ ಟೈಯರ್ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಘಟನೆ ಕೇವಲ ಒಂದು ಬಸ್ ಅವಘಡವಷ್ಟೇ ಅಲ್ಲ. ಮಂಗಳೂರು-ಬೆಂಗಳೂರು ನಡುವೆ, ವಿಶೇಷವಾಗಿ ಶಿರಾಡಿ ಘಾಟ್ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸುವ ಖಾಸಗಿ ಬಸ್ಗಳ ಅಬ್ಬರದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ರಾತ್ರಿ ಹೆದ್ದಾರಿಯಲ್ಲಿ ‘ಲೈಟೇ ಲೈಟು’..! : ರಾತ್ರಿ 10 ಗಂಟೆಯ ನಂತರ ಹೆದ್ದಾರಿಗಳಲ್ಲಿ ಸಂಚರಿಸುವ ಖಾಸಗಿ ಬಸ್ಗಳನ್ನು ಗಮನಿಸಿದರೆ ಅತಿಯಾದ LED ಲೈಟುಗಳು, ಭಾರೀ ಫೋಕಸ್, ನಿಯಮ ಮೀರಿ ಅಳವಡಿಸಿದ ಹೆಡ್ಲೈಟುಗಳು, ಬಸ್ಸಿನ ಸುತ್ತಲೂ ಝಗಮಗಿಸುವ ಲೈಟುಗಳು ಸಾಮಾನ್ಯವಾಗಿವೆ. ಹಲವು ಬಸ್ಗಳಲ್ಲಿ ಡಿಮ್ಮರ್ ವ್ಯವಸ್ಥೆ ಬಳಸದೇ ಎದುರಿನಿಂದ ಬರುವ ವಾಹನ ಚಾಲಕರಿಗೆ ರಸ್ತೆ ಕಾಣದ ಪರಿಸ್ಥಿತಿ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಘಾಟ್ ಪ್ರದೇಶದಲ್ಲಿ ನಿರಂತರ ಬ್ರೇಕ್, ಏರು-ಇಳಿಜಾರು, ಬಸ್ಗಳ ವೇಗ ಹಾಗೂ ಅತಿಯಾದ ವಿದ್ಯುತ್ ಲೋಡ್ ಕಾರಣದಿಂದ ವಾಹನಗಳ ತಾಪಮಾನ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ವಾಹನ ತಜ್ಞರು ಅಭಿಪ್ರಾಯಪಡುತ್ತಾರೆ. ಸಾಕಷ್ಟು ವಿದ್ಯುತ್ ಬಲ್ಬ್ ಗಳಿಗೆ ವಯರ್ಗಳು ಇಡೀ ಬಸ್ಸಿನಲ್ಲಿ ಅಳವಡಿಸಲಾಗಿರುತ್ತದೆ, ಇಂತಹ ಸಂದರ್ಭ ಒಂದು ಸಣ್ಣ ಶಾರ್ಟ್ ಸರ್ಕ್ಯೂಟ್ ಅಥವಾ ಕಿಡಿಯೇ ಸಾಕು, ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಗಾಹುತಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇಲಾಖೆಗಳಿಗೆ ಕಾಣದ ಅಪಾಯವೇ..? : ಇದಕ್ಕೂ ಮೊದಲು ರಾಜ್ಯದಲ್ಲಿ ಅನೇಕ ಖಾಸಗಿ ಬಸ್ ಅವಘಡಗಳು ನಡೆದಿವೆ. ಆದರೂ ನಿಯಮ ಮೀರಿ ಅಳವಡಿಸಿರುವ ಭಾರೀ ಲೈಟುಗಳು, ಅತಿವೇಗ, ರಾತ್ರಿ ಅಬ್ಬರದ ಚಾಲನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕಾಣಿಸುತ್ತಿಲ್ಲ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸಾಮಾನ್ಯ ವಾಹನ ಸವಾರರ ಮೇಲೆ ಸಣ್ಣ ಉಲ್ಲಂಘನೆಗೂ ದಂಡ ವಿಧಿಸುವ ಸಾರಿಗೆ ಇಲಾಖೆ ಹಾಗೂ ಪೊಲೀಸರು, ನಿಯಮ ಮೀರಿ ಸಂಚರಿಸುವ ಕೆಲ ಖಾಸಗಿ ಬಸ್ಗಳ ವಿರುದ್ಧ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಏನು ಮಾಡಬೇಕು ಇಲಾಖೆ..? : ತಜ್ಞರ ಪ್ರಕಾರ , ಖಾಸಗಿ ಬಸ್ಗಳ ಹೆಚ್ಚುವರಿ LED ಹಾಗೂ ಫೋಕಸ್ ಲೈಟುಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ ಇದೆ. ರಾತ್ರಿ ಘಾಟ್ ಮಾರ್ಗ ಸಂಚಾರ, ಹೆದ್ದಾರಿ ಸಂಚಾರದಲ್ಲಿ ವಿಶೇಷ ಸುರಕ್ಷತಾ ನಿಯಮ ಜಾರಿಯಾಗಬೇಕು. ಟೈಯರ್, ಬ್ರೇಕ್, ವೈಯರಿಂಗ್ ಸೇರಿದಂತೆ ತಾಂತ್ರಿಕ ತಪಾಸಣೆ ಕಡ್ಡಾಯವಾಗಬೇಕು. ವೇಗ ಮಿತಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಮಾಸಿಕ ಪರಿಶೀಲನೆ ಅಗತ್ಯ. ಮಿತಿ ಮೀರಿ ಇಡೀ ಬಸ್ಸಿನಲ್ಲಿ ಲೈಟ್ ಅಳವಡಿಕೆ ನಿಲ್ಲಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
A private sleeper bus travelling from Mangaluru to Bengaluru caught fire near Shanthigrama in Hassan district after a tyre burst late at night. All 36 passengers, including women and children, escaped safely due to the driver’s timely action. The incident has once again raised serious concerns over overspeeding, excessive LED lights, and safety violations by private buses operating through Shiradi Ghat during night hours.
ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಸಹಕಾರದಿಂದ ಹವಾಮಾನ ಸ್ನೇಹಿ ಕೃಷಿ, ಡ್ರೋನ್, AI ಹಾಗೂ ಸ್ಮಾರ್ಟ್…
ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ ವಿಜಯಪುರದಲ್ಲಿ ಈ ವರ್ಷ ತಾಪಮಾನ 40 ಡಿಗ್ರಿ…
ಉತ್ತರ ಪ್ರದೇಶದಲ್ಲಿ ಭಾರೀ ಧೂಳುಗಾಳಿ, ಮಳೆ ಹಾಗೂ ಮಿಂಚಿನಿಂದ 140ಕ್ಕೂ ಹೆಚ್ಚು ಮಂದಿ…
ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಮಧ್ಯಾಹ್ನ ನಂತರ ಗುಡುಗು-ಮಿಂಚು ಸಹಿತ ಸಾಧಾರಣ…
ಕರ್ನಾಟಕದ ಹಲವೆಡೆ ಪೂರ್ವ ಮುಂಗಾರು ಮಳೆ ಮುಂದುವರಿದಿದ್ದು, ಕರಾವಳಿಯಲ್ಲಿ ಮೇ 20ರಿಂದ ಮುಂಗಾರು…
ಮೇ 26ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ…