ಭೂಕಂಪನ-ಜಲಸ್ಫೋಟ-ಭೂಕುಸಿತ| ಸಂಪಾಜೆ-ಕಲ್ಮಕಾರು ಪ್ರದೇಶದಲ್ಲಿ ಮಳೆ ಬಂದಾಗ ಭಯ | ಜಲಸ್ಫೋಟಕ್ಕೆ ಕಾರಣವೇನು ? ಆಡಳಿತ ನೋಡಲೇಬೇಕಿದೆ |

August 29, 2022
8:31 PM

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಈಗ ಭಯದ ವಾತಾವರಣ ಉಂಟಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ  ಸಂಪಾಜೆ, ದೇವರಕೊಲ್ಲಿ, ಕೊಯನಾಡು ಪ್ರದೇಶ ಹಾಗೂ ಕಲ್ಮಕಾರು, ಕೊಲ್ಲಮೊಗ್ರ ಪ್ರದೇಶದಲ್ಲಿ ಜಲಸ್ಫೋಟ ಅಥವಾ ಮೇಘಸ್ಫೋಟಗೊಂಡು ಭಾರೀ ಮಳೆಯ ಜೊತೆಗೆ ಭೂಕುಸಿತ ಉಂಟಾಗುತ್ತಿದೆ. ತಪ್ಪಲು ಪ್ರದೇಶದ ಕೃಷಿ ಭೂಮಿ ಸರ್ವನಾಶವಾಗುತ್ತಿದೆ. ಹೀಗಾಗಿ ಮಳೆ ಆರಂಭವಾದಾಗ ಈ ಭಾಗದ ಜನರಿಗೆ ಭಯ ಉಂಟಾಗುತ್ತಿದೆ.

ಕಳೆದ ತಿಂಗಳ ಸುಮಾರು 10 ಕ್ಕೂ ಅಧಿಕ ಬಾರಿ ಸಂಪಾಜೆ ಪ್ರದೇಶದಲ್ಲಿ ಹಾಗೂ ಒಂದೆರಡು ಬಾರಿ ಕಲ್ಮಕಾರು, ಕಡಮಕಲ್‌ ಪ್ರದೇಶದಲ್ಲಿ ಭೂಕಂಪನ ಉಂಟಾಗಿತ್ತು. ಆ ಸಂದರ್ಭ ಚೆಂಬು, ಸಂಪಾಜೆ, ದೇವರಕೊಲ್ಲಿ, ಕಲ್ಲುಗುಂಡಿ ಮೊದಲಾದ ಪ್ರದೇಶಗಳಲ್ಲಿ ಭಾರೀ ಸದ್ದಿನೊಂದಿಗೆ ಭೂಕಂಪನ ಉಂಟಾಗುತ್ತಿತ್ತು. ನಿರಂತರ ಕಂಪನದ ಬಳಿಕ ಚೆಂಬು ಪ್ರದೇಶದಲ್ಲಿಯೇ ರಿಕ್ಟರ್‌ ಮಾಪನವನ್ನು ಇರಿಸಲಾಗಿತ್ತು. ಅದಾಗಿ ಅನೇಕ ದಿನಗಳಾದರೂ ಭೂಕಂಪನಕ್ಕೆ ಕಾರಣ ತಿಳಿಯಲಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣ ಹೇಳಿದರು. 2018 ರಲ್ಲೂ ಇದೇ ಮಾದರಿಯಲ್ಲಿ ಕಂಪನವಾಗಿತ್ತು. ಆ ಕಂಪನಕ್ಕೂ ಕಾರಣ ತಿಳಿಯಲಿಲ್ಲ.

ಇದೀಗ ಭೂಕಂಪನದ ನಂತರ ಭೂಕುಸಿತ, ಜಲಸ್ಫೋಟ, ಮೇಘಸ್ಫೋಟಗೊಳ್ಳುತ್ತಿದೆ. ಒಮ್ಮೆಲೇ ಸಂಜೆಯ ಹೊತ್ತಿಗೆ ಅಥವಾ ರಾತ್ರಿ ಭಾರೀ ಮಳೆಯಾಗುತ್ತದೆ. ಭಾರೀ ಸದ್ದಿನೊಂಡಿದೆ ಗುಡ್ಡ ಕುಸಿತವಾಗುತ್ತದೆ, ಕೆಸರು ಮಿಶ್ರಿತ ಭಾರೀ ನೀರು ಹಾಗೂ ಮರ ನೀರಿನ ಜೊತೆಗೆ ಬರುತ್ತಾ ಕೃಷಿ ಭೂಮಿ , ಮನೆ ನಾಶವಾಗುತ್ತಿದೆ. ಈಗಾಗಲೇ ಸಂಪಾಜೆ, ಕಲ್ಲುಗುಂಡಿ, ದೇವರಕೊಲ್ಲಿ, ಚೆಂಬು, ದಬ್ಬಡ್ಕ ಮೊದಲಾದ ಕಡೆಗಳಲ್ಲಿ ಇದೇ ಮಾದರಿಯ ಕುಸಿತವಾಗಿದೆ. ಜಲಸ್ಫೋಟವಾಗಿದೆ. ಕೃಷಿ ಹಾನಿಯೂ ಆಗಿದೆ. ಕಲ್ಮಕಾರು , ಕೊಲ್ಲಮೊಗ್ರ ಪ್ರದೇಶದಲ್ಲಿ ಕೃಷಿ ಹಾನಿ ಅಧಿಕವಾಗಿದೆ. ಕಡಮಕಲ್‌ ಪ್ರದೇಶದಲ್ಲಿ ಸುರಿಯುವ ಭಾರೀ ಮಲೆ ಹಾಗೂ ಗುಡ್ಡ ಕುಸಿತದ ಜೊತೆಗೆ ಮರ, ಕೆಸರು ನೀರು, ಭಾರೀ ನೀರು ಹರಿಯುತ್ತದೆ. ಇದರಿಂದ ಕೃಷಿ, ಸೇತುವೆ ಎಲ್ಲವೂ ಕೊಚ್ಚಿ ಹೋಗುತ್ತಿದೆ. ಒಂದು ತಿಂಗಳಲ್ಲಿ ಎರಡನೇ ಬಾರಿ ಜಲಸ್ಫೋಟವಾಗಿದೆ. ಅನೇಕರ ಕೃಷಿ ನಾಶವಾಗಿದೆ.

ಈ ಮಾದರಿಯಲ್ಲಿ ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕುಸಿತ, ಕಂಪನವಾಗಲು ಏನು ಕಾರಣ ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ತಕ್ಷಣವೇ ಅಧ್ಯಯನದ ಅಗತ್ಯವಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೃಷಿಕರು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅರಿವನ್ನು ಆಡಳಿತವು ನೀಡಬೇಕಿದೆ.


ಈ ಅನಾಹುತಗಳು ವಿಪರೀತ ಅಭಿವೃದ್ಧಿಯ ಕಾರಣದಿಂದ ಎಂಬ ಕಾರಣವನ್ನು ಕೆಲವರು ಮುಂದಿಟ್ಟರೆ ಭೂಕಂಪನದ ಕಾರಣದಿಂದ ಪಶ್ಚಿಮ ಘಟ್ಟದ ಹಲವು ಕಡೆ ಭೂಮಿ ಬಿರುಕು ಬಿಟ್ಟಿದ್ದು, ಮಳೆಯಾದ ತಕ್ಷಣವೇ ಭೂಮಿಯೊಳಗೆ ನೀರು ಸೇರಿ ಈಗ ಮಣ್ಣು ಸಡಿಲವಾಗಿ ಭೂಕುಸಿತವಾಗುತ್ತದೆ ಎನ್ನುವುದು  ಇನ್ನೊಂದು ವಾದ.  ಅರಣ್ಯ ನಾಶದಿಂದ ಹವಾಮಾನದ ಏರುಪೇರಿನಿಂದ ಎಂಬುದು ಇನ್ನೊಂದು ವಾದ. ಎತ್ತಿನಹೊಳೆಯ ಸಹಿತ ಇತರ ಅಣೆಕಟ್ಟುಗಳ ಕಾರಣದಿಂದ ನೀರಿನ ಒತ್ತಡ ಹೆಚ್ಚಾಗಿದೆ, ಇದೇ ವೇಳೆ ಭಾರೀ ಮಳೆಯ ಕಾರಣದಿಂದ ಮಣ್ಣು ಸಡಿಲಗೊಂಡು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲೂ ನೀರಿನ ಮಟ್ಟ ಹೆಚ್ಚಾಗಿ ಮಣ್ಣು ಮತ್ತಷ್ಟು ಸಡಿಲವಾಗಿ ಈಗ ಭೂಕುಸಿತವಾಗುತ್ತದೆ ಎಂಬುದು ಮತ್ತೊಂದು ವಾದ.

ಆದರೆ ಈ ಭೂಕುಸಿತಕ್ಕೆ ಸರಿಯಾದ ಕಾರಣಗಳನ್ನು ಹುಡುಕಲು ಮತ್ತು ಭವಿಷ್ಯದಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಆಡಳಿತವು ಇಲ್ಲಿ ಸರಿಯಾದ ಅಧ್ಯಯನ ನಡೆಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯಗಳು ಈಗ ಆರಂಭವಾಗಿದೆ.

 

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |
March 17, 2025
3:33 PM
by: ಸಾಯಿಶೇಖರ್ ಕರಿಕಳ
ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror