Advertisement
Opinion

ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?

Share

ಮೊನ್ನೆ ಪಶ್ಚಿಮ ಘಟ್ಟಗಳ ಜಿಲ್ಲಗಳ ಕೆಲವು ಭಾಗದ ಶಾಲೆಗಳಿಗೆ ಆಯಾ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ರಜೆ ಕೊಟ್ಟ ತಕ್ಷಣ ಹಲವಾರು ಜನರು “ಇನ್ಮೇಲೆ ಮಳೆ ಕೈದಾಗುತ್ತದೆ ” ಎಂದು ಗೇಲಿ ಮಾಡಿದರು.  ಈ ಗೇಲಿಗೆ ಯಾರೋ ಒಬ್ಬರು ಮಾನ್ಯ ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಅಸಹಾಯಕರು ಎಂದು ಜಿಲ್ಲಾಧಿಕಾರಿಗಳ ಸಮರ್ಥನೆ ಮಾಡಿದರು.

ಮಲೆನಾಡಿನಲ್ಲಿ ಮಳೆಗಾಲದ ಸಮಯದಲ್ಲಿ ಶಾಲೆ ಮಕ್ಕಳು ಶಾಲೆ ಗೆ ಹೋಗಿ ಬರುವ ವಿಚಾರದಲ್ಲಿ ಪೋಷಕರು ಮತ್ತು ಶಾಲೆ ಮೇಷ್ಟ್ರು ಇಬ್ಬರೂ ಜಾಗ್ರತೆ ಯಾಗಿರಬೇಕು. ಮೊದಲು ಮಗುವಿನ‌ ಸುರಕ್ಷತೆಗೆ ಆದ್ಯತೆ ನೀಡಬೇಕು. ಇವತ್ತು ಪ್ರತಿ ಶಾಲೆಯ ಪ್ರತಿ ಮಗುವೂ ಇಂತಹ ಭಾಗದಿಂದ ಬರುತ್ತದೆ ಎಂಬ ಮಾಹಿತಿ ಆಯಾ ಶಾಲೆಯ ಮೇಷ್ಟ್ರುಗಳಿಗೆ ಇರುತ್ತದೆ. ಅಪಾಯಕಾರಿ ಹಾದಿಯಲ್ಲಿ ಶಾಲೆಗೆ ಬರುವ ಮಕ್ಕಳ ವಿಚಾರದಲ್ಲಿ ಶಿಕ್ಷಣ ಇಲಾಖೆ ಮಳೆಗಾಲದ ದಿನಗಳಲ್ಲಿ ವಿನಾಯಿತಿ ತೋರಬೇಕಾಗುತ್ತದೆ. ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ.

ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಮಳೆ ಬೀಳುವ ವಿಶೇಷವಾಗಿ ಹೆಚ್ಚು ಅಪಾಯಕಾರಿ ಸ್ಥಳಗಳ ಶಾಲೆ ಮುಖ್ಯೋಪಾಧ್ಯಾಯರಿಗೇ ಶಾಲೆಗೆ “ರಜೆ” ನೀಡುವ ಅಧಿಕಾರ ನೀಡಬೇಕು. ತಾಲ್ಲೂಕು ಶಿಕ್ಷಣಾಧಿಕಾರಿಯೋ , ಜಿಲ್ಲಾಧಿಕಾರಿಯೋ ಈ ತುರ್ತು ಗಮನಿಸಿ ರಜೆ ಘೋಷಣೆ ಮಾಡುವಾಗ ಖಂಡಿತವಾಗಿಯೂ ಮಳೆಯ ತೀವ್ರತೆ ಮುಗಿದಿರುತ್ತದೆ. ಈ ತೀವ್ರ ಮಳೆಯಲ್ಲೇ ಶಾಲೆಗೆ ಬರುವ ಮಗುವಿಗೆ ರಿಸ್ಕಿರುತ್ತದೆ. ಆದ್ದರಿಂದ ಮಳೆ ತೀವ್ರವಾಗಿ ಬಂದು ಬಿಟ್ಟ ಮೇಲೆ ರಜೆ ಕೊಟ್ಟರೆ ಮಕ್ಕಳಿಗೇನೂ ಪ್ರಯೋಜನ ಇಲ್ಲ.

ನಮ್ಮ ಮಲೆನಾಡು ಕರಾವಳಿಯ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಶಾಲೆಯಾದರೂ ” ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆ ” ಯಾಗಿರುತ್ತದೆ. ಒಂದು ಕಾಲದಲ್ಲಿ ಸರ್ಕಾರಿ ಶಾಲೆಯನ್ನು “ದನದ ದೊಡ್ಡಿ‌” ಅಂತ ವಿಶ್ಲೇಷಣೆ ಮಾಡುತ್ತಿದ್ದರು. ಒಬ್ಬರು ಮೇಷ್ಟ್ರು ನಾಲ್ಕು ಕ್ಲಾಸು ಐವತ್ತು ಅರವತ್ತು ವಿದ್ಯಾರ್ಥಿಗಳು…!

ಈಗ ಅದೇ ಶಾಲೆಗಳಲ್ಲಿ “ಎರಡು ಮೂರು ಮಕ್ಕಳು.. ಒಬ್ಬರು ಮೇಷ್ಟ್ರು” ಮತ್ತು ಒಬ್ಬರು ಅಡಿಗೆ ಸಹಾಯಕರು…! ಕಾಲ ಚಕ್ರ ಉಲ್ಟಾ ತಿರುಗುತ್ತಿದೆಯೇನೋ ಅನಿಸುತ್ತಿದೆ…! ಮಲೆನಾಡಿನ ಊರೂರಿನಲ್ಲಿ ಈಗ ಪಾಳು ಬಿದ್ದ ಪುರಾತನ ಸ್ಮಾರಕದಂತಹ ಶಾಲೆಗಳು ಮತ್ತು ಇನ್ನೂ ಕೆಲವು ಶಾಲೆಗಳು ಒಂದು ಎರಡು ಮೂರು ಮಕ್ಕಳಿಂದ ಕುಟುಕು ಜೀವ ಹಿಡಿದು ಉಳಿದಿವೆ…!

ಹಾಗಾದರೆ ಜನಸಂಖ್ಯೆ  ಕಡಿಮೆ ಆಯಿತಾ…?, ಇಲ್ಲ… ಇದು ಜನಸಂಖ್ಯೆ ಕಡಿಮೆ ಆದ ಎಫೆಕ್ಟ್ ಅಲ್ಲ….!

ಉಳ್ಳವರ ಮಕ್ಕಳು ಖಾಸಗಿ ಶಾಲೆಗಳ ಬಸ್ ಹತ್ತಿ ದೂರದೂರದ ಖಾಸಗಿ ಶಾಲೆ ಗೆ ಹೋಗುತ್ತಿವೆ. ಉಳ್ಳವರು ತಮ್ಮ ಮಕ್ಕಳ ಶಾಲಾ ಬ್ಯಾಗ್ ಹೊತ್ತು ಮಕ್ಕಳನ್ನ ಶಾಲೆಯ ಬಸ್ ಗೆ ಹತ್ತಿಸಿ ಮನೆಗೆ ಮರಳಿ ಮತ್ತೆ ಸಂಜೆ ಶಾಲೆ ಬಸ್ ಬರುವ ಸಮಯದಲ್ಲಿ ಕಾದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ…

ಕೂಲಿ ಕಾರ್ಮಿಕ ಬಡವರು “ಸಹಸ್ರ” “ಲಕ್ಷ ರೂಪಾಯಿ” ಡೊನೇಷನ್ , ಬಸ್ ಚಾರ್ಜ್ ಕೊಟ್ಟು ಖಾಸಗಿ ಶಾಲೆಗೆ ಕಳಿಸುವಷ್ಟು ಶಕ್ತರಲ್ಲ….!. ಅವರು ಬೆಳಗೆದ್ದು ಕಂಡವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿ ಹೊಟ್ಟೆ ಹೊರೆಯುವುದು ಅನಿವಾರ್ಯ . ಸರ್ಕಾರಿ ಶಾಲೆ ಸಮಯಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಅವರಿಗೆ ಸಮಯಾವಕಾಶ ಇರುವುದಿಲ್ಲ. ಆ ಸಮಯಕ್ಕೆ ಅವರು ಕೂಲಿ ಕೆಲಸಕ್ಕೆ ಹೋಗಲೇಬೇಕಾಗಿರುತ್ತದೆ. ಹಾಗಾಗಿ ಮಲೆನಾಡು ಕರಾವಳಿಯ ಪ್ರದೇಶದ ಸರ್ಕಾರಿ ಶಾಲೆಗೆ ಹೋಗುವ ಅನೇಕ ಮಕ್ಕಳು ಹಳ್ಳ-ಹೊಳೆ ದಾಟಬೇಕು, ಸಾರದಲ್ಲಿ ದಾಟಿ ಹೋಗಬೇಕು, ಕಾಡಿನಲ್ಲಿ ಒಂಟಿಯಾಗಿ ಸಾಗಬೇಕು.

ನಮ್ಮ ಮಲೆನಾಡು ಕರಾವಳಿಯ “ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆ” ಯನ್ನು ಮುಚ್ಚಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ “ಕೇಂದ್ರೀಕೃತ ಶಾಲೆ” ಯನ್ನು ಅಭಿವೃದ್ಧಿ ಪಡಿಸಿ ಗ್ರಾಮ ದ ಪ್ರತಿ ಮನೆಯ ಪ್ರತಿ ಮಗುವನ್ನೂ ಶಾಲೆಗೆ ಕರೆದೊಯ್ಯುಲು ಸಹಾಯಕರನ್ನು ಮತ್ತು ಪ್ರತಿ ಊರಿನಲ್ಲಿ ಇರುವ ರಿಕ್ಷಾ ಮತ್ತು ಖಾಸಗಿ ಕಾರಿನವರಿಗೆ ವರ್ಷಕ್ಕೆ ಇಂತಿಷ್ಟು ಎಂದು ಬಾಡಿಗೆ ಕಂಟ್ರಾಕ್ಟ್ ಮಾಡಿ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದೊಯ್ದು ನಂತರ ಶಾಲೆಯಿಂದ ಮನೆಗೆ ಮರಳಿ ಬಿಡುವ ವ್ಯವಸ್ಥೆ ಮಾಡಬಹುದು. ಹೀಗೆ ಮಾಡಿದರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಪೋಷಕರಿಗೂ ಒಳ್ಳೆಯ ಅನುಕೂಲ ಆಗುತ್ತದೆ. ಗ್ರಾಮ ಪಂಚಾಯತಿ ಗೆ ಕನಿಷ್ಠ ಎರಡಂತೂ “ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆ ” ಇರುತ್ತದೆ. ಈ ಕನಿಷ್ಠ ಸಂಖ್ಯೆಯ ಮಕ್ಕಳ ಶಾಲೆಗೆ ಸರ್ಕಾರ ವ್ಯಯ ಮಾಡುವ ಸಂಬಳ ಸಾರಿಗೆಯ ಹತ್ತು ಪ್ರತಿಶತ ಹಣದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಸಾರಿಗೆ ವ್ಯವಸ್ಥೆ ಗೆ ಹಣ ಹೊಂದಿಸಬಹುದು.

ಪ್ರತಿ ಮಳೆಗಾಲದಲ್ಲೂ ಮಲೆನಾಡು ಕರಾವಳಿಯ ಪ್ರದೇಶದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗೆ ಹೋಗುವ ಬಡವರ ಮಕ್ಕಳು ಬಹಳ ಅಪಾಯವನ್ನು ಎದುರಿಸುವುದನ್ನ ಪೋಷಕರು ಅಸಾಹಾಯಕರಾಗುವುದನ್ನ ಸರ್ಕಾರ , ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರು , ಜಿಲ್ಲಾಧಿಕಾರಿಗಳು, ಮಲೆನಾಡು ಕರಾವಳಿಯ ಜಿಲ್ಲೆಯ ಸಂಸದರು, ಶಾಸಕರು ಗಮನ ಹರಿಸಬೇಕಿದೆ.

ಆಕಸ್ಮಾತ್ತಾಗಿ‌ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಂದ ತುಂಬಿ ಕಲರವ ಮೂಡುತ್ತದೆ.
ಈಗ ಸರ್ಕಾರದ ಶಾಲೆಗಳು ಖಾಸಗಿ ಶಾಲೆ ಗಳನ್ನು ಎಲ್ಲಾ ಬಗೆಯಲ್ಲೂ ಅನುಕರಿಸುತ್ತಿದೆ. ಆದರೆ ಮಕ್ಕಳನ್ನು ಶಾಲೆಗೆ ಕರೆ ತರುವ “ಸಾರಿಗೆ ವ್ಯವಸ್ಥೆ” ಒಂದು ವಿಚಾರದಲ್ಲಿ ಹಿಂದುಳಿದು ಗ್ರಾಮೀಣ ಪ್ರದೇಶದ ಮಕ್ಕಳು , ಬಡವರ ಮಕ್ಕಳು, ಖಾಸಗಿ ಶಾಲೆಗೆ ಹೋಗುವ ಉಳ್ಳವರ ಮಕ್ಕಳು, ಉಳ್ಳವರನ್ನ ಅನುಕರಿಸಲು ಹೋಗಿ ಮಕ್ಕಳ ವಿಧ್ಯಾಭ್ಯಾಸ ಕ್ಕಾಗಿ ಸಾಲಗಾರರಾಗುವ ಬಡಬಗ್ಗರು..!. ಗ್ರಾಮೀಣ ಪ್ರದೇಶದ ಶಾಲೆಗೆ ಹೋಗುವ ಮಕ್ಕಳು ಪಟ್ಟಣದ ಶಾಲೆಗೆ ಹೋಗುವ ಮಕ್ಕಳ ಎದುರು “ದ್ವಿತೀಯ ದರ್ಜೆ “ಯಾಗುವಂತಾಗಲು ಸರ್ಕಾರವೇ ಕಾರಣವಾಗುತ್ತಿದೆ. ಅದಕ್ಕೆ ಮೂಲ “ಸಾರಿಗೆ “…. ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಲಿ…..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

20 hours ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

1 day ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

1 day ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

2 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

2 days ago