ಮಳೆಗಾಲದ ಆತಂಕ……. ಅಂದ ಹಾಗೆ ಮದ್ದು ಬಿಟ್ಟಾಯಿತಾ…..?

June 14, 2020
12:28 PM

ಆಕಾಶದಲ್ಲಿ ಸಣ್ಣಕೆ ಮೋಡ , ಬೆವರು ಸುರಿವಷ್ಟು ಸೆಕೆ,  ಮಳೆ ಒಂದು ವಾರ ಮುಂದೆ ಹೋಗಿದ್ದರೆ ಸಾಕು ಎನ್ನುವ ಅಪ್ಪ. ತಲೆಯಿಂದ ಸುರಿಯುವ ಬೆವರನ್ನು ಒರೆಸುತ್ತಾ ಒಮ್ಮೆ ‌ಮಳೆ ಬಂದರೆ ಸಾಕಿತ್ತು ಎನ್ನುವ ಮಗನಿಗೆ ಅಪ್ಪನ ತಲೆಬಿಸಿ ಅರ್ಥವಾಗುವುದಾದರೂ ಹೇಗೆ?

ಮಳೆ ಆರಂಭದ ಮೊದಲು ಅಡಿಕೆ ತೋಟಕ್ಕೆ ಮದ್ದು( ಶಿಲೀಂಧ್ರ ನಾಶಕಗಳು)   ಬಿಡುವ ಕಾರ್ಯ ಬಹಳ ಪ್ರಾಮುಖ್ಯ ವಾದುದು. ವರ್ಷವಿಡೀ ಆರೈಕೆ ಮಾಡಿದ ಅಡಿಕೆ ಗಿಡಗಳ ಫಲ ಕೈ ಗೆ ಬರಬೇಕಾದರೆ ಸರಿಯಾದ ಸಮಯಕ್ಕೆ ಔಷಧಿ ಸಿಂಪಡಣೆ ಆಗಲೇ ಬೇಕು. ಮೈಲುತುತ್ತು ಸುಣ್ಣಗಳ ಸರಿಯಾದ ಪಾಕಕ್ಕೆ, ತಕ್ಕ ಪ್ರಮಾಣದ ನೀರು ಸೇರಿಸಿ‌ ಎಳೆಯ ಅಡಿಕೆ ಗೊನೆಗಳಿಗೆ ಬಿಡುವ ಕಾರ್ಯವನ್ನೇ ಗ್ರಾಮ್ಯ ಭಾಷೆಯಲ್ಲಿ ಮದ್ದು ಬಿಡುವುದು ಅನ್ನುವುದು. ಸರಿಯಾದ ಕಾಲಕ್ಕೆ  ಸರಿಯಾಗಿ   ಮದ್ದು ಬಿಟ್ಟರೆ   ಬೆಳೆದ ಬೆಳೆ ಕೈ‌ಸೇರುವುದರಲ್ಲಿ ಸಂಶಯವಿಲ್ಲ ಎಂಬುದು ಹಿರಿಯರ ನಂಬಿಕೆ.  ಇಲ್ಲವಾದರೆ ಕೊಳೆ ರೋಗ ಇಡೀ ತೋಟವನ್ನೇ ಆಪೋಷನ ತೆಗೆದು ಕೊಳ್ಳುವ ಭಯ ಎಲ್ಲರನ್ನು ಕಾಡುವಂತಹುದೇ. ಮಳೆಗಾಲಕ್ಕಿನ್ನೂ ಎರಡು ತಿಂಗಳಿದೆಯೆನ್ನುವಾಗಲೇ  ತಲೆಬಿಸಿ ಶುರು.

ನಮ್ಮ ಹಳ್ಳಿಗಳಲ್ಲಿ ಕೃಷಿಕರು,   ಎಪ್ರಿಲ್, ಮೇ ತಿಂಗಳುಗಳಲ್ಲಿ ಎಲ್ಲಿ ಹೋದರೂ  ಒಂದೇ ಮಾತು ,ಮದ್ದು ಬಿಟ್ಟಾಯಿತಾ  ನಿಮಗೆ ? ನಿಮ್ಮಲ್ಲಿ ಜನ ಸಿಗುತ್ತಾರಾ ? ಎಷ್ಟು ಜನ ಇದ್ದಾರೆ ? ಎಷ್ಟು ಡ್ರಮ್ ಬೇಕು? ಮದ್ದು  ಹೇಗೆ ಮುಗಿಸುತ್ತಾರೆ? ಹೀಗೆ ಒಂದಾ ಎರಡಾ  ಹಲವು ಪ್ರಶ್ನೆ ಗಳು.  ಪರಸ್ಪರ ಏನೇ ವಿಷಯ ಮಾತಾಡಿದರೂ ಕೊನೆಗೆ ಬರುವುದು  ಮದ್ದು ಬಿಡುವ ವಿಷಯಕ್ಕೇ. 

ಕೆಲವು ವರ್ಷಗಳ ಹಿಂದಿನ ಚಿತ್ರಣ ಹೀಗಿರಲಿಲ್ಲ . ಆ ದಿನಗಳಲ್ಲಿ ಮದ್ದು ಬಿಡುವುದೆಂದರೆ ಗೌಜಿಯೋ ಗೌಜಿ.   ಮದ್ದು ಬಿಡುವ ಒಂದು  ಪಂಪ್ ನೊಟ್ಟಿಗೆ ಕಮ್ಮಿಯಲ್ಲಿ ಮೂರು  ಜನ ಬೇಕಿತ್ತು.‌ ಆ ಪಂಪ್ ಗೆ ತೋಳ್ಬಲವೇ ಸಾಕಿತ್ತು. ಪೆಟ್ರೋಲ್  ಬೇಕಿರಲಿಲ್ಲ . ಒಬ್ಬ ಮದ್ದು ಬಿಡಲು, ಇನ್ನೊಬ್ಬ ಪಂಪ್ ಗೆ ಗಾಳಿ ಹಾಕಲು, ಮತ್ತೊಬ್ಬ ಮದ್ದು ಹೊರಲು.‌ ಡ್ರಮ್ ಲ್ಲಿ ಮದ್ದು ಮಿಶ್ರ  ಮಾಡಿ  ಕೊಡಪಾನದಲ್ಲಿ ತಂದು ಪಂಪ್ ನ ಬುಡದಲ್ಲಿ ಇಡಲು. ದೊಡ್ಡ ತೋಟವಾದರೆ ಮೂರು ನಾಲ್ಲು ಪಂಪ್ ಗಳು. ಹಾಗೇ ಒಂದೊಂದು ‌ಪಂಪಿಗೂ‌ ಮೂರು ನಾಲ್ಕು ಜನರ ಸೆಟ್ಟು.  ಮರಹತ್ತಿ ಮದ್ದು ಬಿಡುವವ ಒಳ್ಳೆ  ತೂಕದ ಮನುಷ್ಯ. ಅವನಿಗೆ ಬೆಲೆ ಜಾಸ್ತಿ. ಆ ಮೇಲಿನ ಚಾನ್ಸ್ ಪಂಪಿಗೆ ಗಾಳಿ ಹಾಕುವವನಿಗೆ. ಆಮೇಲಿನವರು ಮದ್ದು ಹೊರುವವರು, ಮಾಡುವವರು.  ತೋಟಕ್ಕೆ ಮದ್ದು ಬಿಡುವುದೆಂದರೆ  ಮಳೆಗಾಲದ ಜಂಬರವೇ( ಕಾರ್ಯಕ್ರಮ) ಸರಿ.  ಬೇರೆ ಎಲ್ಲಾ ಕಾರ್ಯಗಳನ್ನು ಬದಿಗೊತ್ತಿ  ಮದ್ದು ಬಿಡುವ ಕಾರ್ಯಕ್ಕೇ ಒತ್ತು ಕೊಡಲಾಗುವುದು.
ಈಗ ಎಲ್ಲದಕ್ಕೂ ಯಂತ್ರಗಳು ಬಂದಿವೆ. ಗಾಳಿ ಹಾಕುವ ಕೆಲಸವಿಲ್ಲ.  ಒಂದು ಯಂತ್ರವಿದ್ದರೆ ಮೂರು ಜನರು ಮದ್ದು ಬಿಡ ಬಹುದು. ಅಲ್ಲಿಲ್ಲಿ ಮದ್ದು ಮಾಡಬೇಕಾದದ್ದೂ ಇಲ್ಲ. ಮನೆಯಂಗಳದಲ್ಲೇ ಡ್ರಮ್ ನಲ್ಲಿ ಮದ್ದು ಮಾಡಬಹುದು. ಉದ್ದದ ಪೈಪ್ ಇದ್ದರಾಯಿತು. ಎಷ್ಟು ದೂರ ಬೇಕಾದರೂ ಪೈಪ್ ಎಳೆದು‌ ಮನೆಯಂಗಳದಿಂದಲೇ ಮದ್ದು ಬಿಡುವ ಸೌಕರ್ಯ. ಇನ್ನೂ ತೋಟದ ಹಾಗೂ ಮದ್ದು ಬಿಡುವ ಸ್ಥಳಗಳ ಆಗು ಹೋಗುಗಳಿಗೆ ವಿಡಿಯೋ ಕಾಲ್ ಗಳನ್ನು ಬಳಸುವುದು  ಮೆಚ್ಚಿನ ಅಭ್ಯಾಸವಾಗಿದೆ.
ಮಳೆ , ಬಿಸಿಲಿನ ಕಣ್ಣಾಮುಚ್ಚಾಲೆಯಾಟದಲ್ಲಿ ಹೈರಾಣಾಗುವುದು ರೈತ.   ಇಡೀ ದಿನ ಬಿಸಿಲಿದ್ದರೂ ಮದ್ದು ಬಿಡಲು ಜನ ಬಾರದೇ ಇದ್ದರೆ ಏನೂ ಮಾಡಲಾಗದ  ಪರಿಸ್ಥಿತಿ.  ಮಳೆಯೂ ಹಾಗೇ. ಎಲ್ಲಾ ತಯಾರಾಗಿ  ಇನ್ನೇನು ಮರಹತ್ತಬೇಕು ಎನ್ನುವಾಗ ಮೋಡವೂ ಇಲ್ಲದೆ ಐದು ನಿಮಿಷವಾದರೂ ದೋ ಎಂದು ಸುರಿಯುವ ಮಳೆಗೆ ಛೇ… ಛೇ ಎಂದು ಹೇಳಿಕೊಂಡದ್ದೇ ಬಂತು. ಹಠ ಮಾಡುವ ಮಕ್ಕಳಂತೆ, ಎಷ್ಟು ಸಮಯವಾದರೂ ಬಿಡದೆ ಸತಾಯಿಸುವ ಮಳೆಗೆ ಯಾವಾಗಲೂ ಒಂದು ಬೈಗಳು ಇದ್ದ ದ್ದೇ.  ಸಮಯಕ್ಕೆ ಮದ್ದು ಬಿಟ್ಟಾದರೆ ಹಪ್ಪಳವನ್ಮು ಖುಷಿಯಲ್ಲಿ ತಿನ್ನಬಹುದು, ಮದ್ದು ಬಿಡುವ ಕೆಲಸ ಒತ್ತರೆ ಆಗದಿದ್ದರೆ  ಹಾಳಾದ ಮಳೆ   ಯಾವಾಗ ಬಿಡುತ್ತದೋ   ಎನ್ನುತ್ತಾ ಹಪ್ಪಳ  ತುಂಡರಿಸ ಬಹುದು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ
18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ
July 24, 2026
6:22 AM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಸಿಪ್ಪೆಯಿಂದ ಕೈಗಾರಿಕಾ ಬಳಕೆಯ ಸೆಲ್ಯುಲೋಸ್..! ರೈತರಿಗೆ ಮೌಲ್ಯವರ್ಧನೆಯ ಹೊಸ ಅವಕಾಶ
July 19, 2026
8:11 AM
by: ದ ರೂರಲ್ ಮಿರರ್.ಕಾಂ
ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror