ಬೆಳ್ಳಾರೆ : ಜಾತಿ, ಧರ್ಮ, ಪಕ್ಷ ಎಂಬ ಬೇಲಿ ದಾಟಿ ಸರ್ವಧರ್ಮಿಯರು ಒಂದುಗೂಡಿ ವಿಶಿಷ್ಟ ಕಾರ್ಯಚಟುವಟಿಕೆ ಮೂಲಕ ವರ್ಷಂಪ್ರತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಈ ಬಾರಿ ಹತ್ತರ ಹರೆಯ.
2009 ಸೆಪ್ಟೆಂಬರ್ 18 ರಂದು ಈ ಸಮಿತಿ ಜನ್ಮ ತಾಳಿದೆ. ಕಳೆದ ಹತ್ತು ಅವಧಿಯಲ್ಲಿ ಹತ್ತಾರು ಕಾರ್ಯಚಟುವಟಿಕೆ ಮೂಲಕ ತನ್ನೂರಿನಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಇಪ್ಪತ್ತು ಜನರ ಪುಟ್ಟ ತಂಡವೊಂದು ತಾಲೂಕಿನ ವಿಶೇಷ, ವಿಶಿಷ್ಟ ಸಂಘಟನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಜಾತಿ, ಧರ್ಮ, ಪಕ್ಷ ಬೇಧವಿಲದೆ ರಚನೆಗೊಂಡ ಸಂಘಟನೆ ಇದಾಗಿದ್ದು, ಇಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವುದಿಲ್ಲ. ಕ್ರೀಡಾಕೂಟ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಗಣೇಶೋತ್ಸವ ಆಚರಣೆ ಇಲ್ಲಿನ ವಿಶೇಷತೆ. ಇಲ್ಲಿ ಸರ್ವಧರ್ಮಿಯರು ಸಂಘಟನೆ ನೇತೃತ್ವ ವಹಿಸಿ ಯಶಸ್ಸಿಯಾಗಿ ಮುನ್ನಡೆಸಿರುವುದು ಈ ಊರಿನ ಸಾಮರಸ್ಯ, ಸೌಹಾರ್ದತೆಗೆ ಒಂದು ಉದಾಹರಣೆ ಎನ್ನುತ್ತಾರೆ ಸಮಿತಿಯ ಸ್ಥಾಪಕ ಜಗನ್ನಾಥ ಪೂಜಾರಿ ಮುಕ್ಕೂರು.
ಪ್ರಾರಂಭದ ದಿನಗಳಲ್ಲಿ ನಿರ್ಧಿಷ್ಟ ಸ್ಪರ್ಧೆಗಳಿಗೆ ಸೀಮಿತವಾಗಿದ್ದ ಕಾರ್ಯಕ್ರಮ ಕ್ರಮೇಣ ಹಲವು ಚಟುವಟಿಕೆಗಳನ್ನು ಸೇರಿಸಿಕೊಂಡು ವರ್ಷದಿಂದ ವರ್ಷಕ್ಕೆ ಅರ್ಥಪೂರ್ಣ ನೆಲೆಯಲ್ಲಿ ಆಯೋಜನೆಗೊಂಡು ಸರ್ವ ಸಮುದಾಯದ ಪ್ರೀತಿಗೆ ಪಾತ್ರವಾಗಿದೆ. ಊರ ಸಾಧಕರನ್ನು ಮತ್ತು ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಈ ಊರಿನ 50ಕ್ಕೂ ಅಧಿಕ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸಮ್ಮಾನಿಸಲಾಗಿದೆ ಎನ್ನುತ್ತಾರೆ ಸಮಿತಿ ಕೋಶಾಧಿಕಾರಿ ರಮೇಶ್ ಕಾನಾವು.
ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದಿಂದ ಬಂದಿರುವ ಯುವಕರ ತಂಡ ಧರ್ಮ, ಜಾತಿ ಭೇಧವಿಲ್ಲದೆ ಕಟ್ಟಿಕೊಂಡ ಸಮಿತಿ ತನ್ನ ಸಮಾಜಮುಖಿ ಚಿಂತನೆಯ ಭಾಗವಾಗಿ ಕೆಲ ಬಡ ಕುಟುಂಬಕ್ಕೆ ತನ್ನ ವ್ಯಾಪ್ತಿಯೊಳಗೆ ಸಹಕಾರ ನೀಡಿದೆ. ಮುಂದೆಯು ನೀಡುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಿದೆ. ಸಂಭ್ರಮದ ಜತೆಗೆ ಸಹಕಾರದ ಮನೋಭಾವನೆಯ ಸಂಕಲ್ಪದೊಂದಿಗೆ ಈ ಊರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಾಮರಸ್ಯ ಬೆಸೆಯುವ ಕೊಂಡಿಯಾಗಬೇಕು ಎನ್ನುವ ಆಶಯ ಹೊಂದಿದೆ.
ಹತ್ತರ ಹುತ್ತರಿ ಸಂಭ್ರಮ
ದಶ ಸಂಭ್ರಮದ ಪ್ರಯುಕ್ತ ಅ.31 ರಂದು ರಾತ್ರಿ ಮುಕ್ಕೂರು ಶಾಲಾ ವಠಾರದಲ್ಲಿ ಹತ್ತರ ಹುತ್ತರಿ ಸಂಭ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ 20 ಸಾಧಕರಿಗೆ ಸಮ್ಮಾನ ನಡೆಯಲಿದೆ. ಅಖಿಲಾ ಪಜಿಮಣ್ಣು ಮತ್ತು ಸುಂದಾರ ರೈ ಮಂದಾರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…